ಬೆಂಗಳೂರು:‘ಅಚ್ಛೇ ದಿನ್’ ಎಂದು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಹಸಿವಿನತ್ತ ಕೊಂಡೊಯ್ಯುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿ ಸರಣಿ ಟ್ವೀಟ್ ಮಾಡಿರುವ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಗೊಳಿಸಿದ್ದ ಜನಪರ ಯೋಜನೆಗಳನ್ನು ರದ್ದುಪಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
‘ಗರೀಬಿ ಹಟಾವೋ’ ಘೋಷಣೆಯೊಂದಿಗೆ ಬಡತನದ ವಿರುದ್ಧ ಸಮರ ಸಾರಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರನ್ನು ಟೀಕಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ಅಚ್ಛೇ ದಿನ್’ ಹೆಸರಿನಲ್ಲಿ ಭಾರತವನ್ನು ನಾಲ್ಕು ದಶಕಗಳ ಹಿಂದಿನ ಹಸಿವಿನ ದಿನಗಳಿಗೆ ಕೊಂಡೊಯ್ಯುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಅನ್ನಭಾಗ್ಯ,ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್, ಸವಿರುಚಿ ಸಂಚಾರಿ ಕ್ಯಾಂಟಿನ್ ಮೊದಲಾದ ನನ್ನ ಸರ್ಕಾರದ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಪ್ರಯತ್ನ ನಡೆಸುತ್ತಿರುವ ಬಿಜೆಪಿ ಸರ್ಕಾರವು ಕರ್ನಾಟಕವನ್ನು ನರೇಂದ್ರ ಮೋದಿ ಅವರ ಕನಸಿನ ‘ಅಚ್ಛೇ ದಿನ್’ ಕಡೆ ಕೊಂಡೊಯ್ಯಲು ನಿರ್ಧರಿಸಿದಂತಿದೆ’ ಎಂದು ಇನ್ನೊಂದು ಟ್ವೀಟ್ನಲ್ಲಿ ವ್ಯಂಗ್ಯವಾಡಿದ್ದಾರೆ.
‘ನಮ್ಮ ಕಾಂಗ್ರೆಸ್ಸರ್ಕಾರ ಹಸಿವಿನ ವಿರುದ್ಧ ಸಮರ ಸಾರಿತ್ತು. ಮೋದಿಅವರು, ‘ಹಸಿವಿನ ಪರ ಸಮರ’ ಸಾರಿದಂತಿದೆ. ಇದಕ್ಕೆ ಈ ಪತ್ರಿಕಾ ವರದಿಗಳು ಸಾಕ್ಷಿ’ ಎಂದು ಗ್ರಾಹಕರ ವೆಚ್ಚದಲ್ಲಿ ಇಳಿಕೆ, ಬಡತನ ಹೆಚ್ಚಳಕ್ಕೆ ಸಂಬಂಧಿಸಿದ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.