ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಂದಿನ ದೆಹಲಿ ಭೇಟಿಯಿಂದ ಡಿ.ಕೆ. ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇ ಕುತ್ತು ಬರಬಹುದು ಎಂದು ಬಿಜೆಪಿ ರಾಜ್ಯ ಘಟಕ ಹೇಳಿದೆ.
ಈ ಕುರಿತು ಬಿಜೆಪಿ ರಾಜ್ಯ ಘಟಕದ ಅಧಿಕೃತ ಖಾತೆಯಿಂದ ಭಾನುವಾರ ಸರಣಿ ಟ್ವೀಟ್ ಮಾಡಿದ್ದು, ‘ಸಿದ್ದರಾಮಯ್ಯ ಅವರ ಮೊದಲ ದೆಹಲಿ ಭೇಟಿ ಶಿವಕುಮಾರ್ ಸಲ್ಲಿಸಿದ್ದ ಪದಾಧಿಕಾರಿಗಳ ಪಟ್ಟಿಯ ನಿರ್ಲಕ್ಷ್ಯಕ್ಕೆ ಕಾರಣವಾಯಿತು. ಎರಡನೇ ಭೇಟಿಯಿಂದ ಪದಾಧಿಕಾರಿಗಳ ಪಟ್ಟಿ ತಿರಸ್ಕೃತಗೊಂಡಿತು. ಮೂರನೇ ಭೇಟಿಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತರಲಿದೆಯೆ?’ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ.
ಕಾಂಗ್ರೆಸ್ನ ಸದಸ್ಯತ್ವ ನೋಂದಣಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ‘ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲ. ಆಂತರಿಕ ಚುನಾವಣೆಯೂ ನಡೆಯುವುದಿಲ್ಲ, ಸದಸ್ಯತ್ವ ನೋಂದಣಿಯೂ ಆಗುವುದಿಲ್ಲ’ ಎಂದು ಟೀಕಿಸಿದೆ.
‘ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಭ್ರಷ್ಟಾಚಾರ ಮಾಡಿರಬೇಕು. ಮನೆಯ ಆಸ್ತಿಯನ್ನೇ ದೋಚುವ ಕಲೆ ಇರಬೇಕು. ಕಾಂಗ್ರೆಸ್ ಮುಕ್ತ ಭಾರತಕ್ಕೆ ಅವಿರತ ಶ್ರಮಿಸಬೇಕು’ ಎಂದು ಟೀಕಾಪ್ರಹಾರ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.