ADVERTISEMENT

ಸರ್ಕಾರದಿಂದ ಪ್ರಜಾಪ್ರಭುತ್ವ ವಿರೋಧಿ ನೀತಿ: ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 8:03 IST
Last Updated 24 ಮಾರ್ಚ್ 2020, 8:03 IST
   

ಬೆಂಗಳೂರು: 'ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಚರ್ಚಿಸಿದ್ದರೂ ಸದನದಲ್ಲಿ ಮಸೂದೆ ಮಂಡಿಸಲು ಸರ್ಕಾರ ಮುಂದಾಗಿದೆ. ಇದ್ಯಾವ ಲೆಕ್ಕ? ಭಂಡತನ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಿದು. ತೀರ್ಮಾನ ಮಾಡಿದಂತೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯ. ಸಭಾಧ್ಯಕ್ಷರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಪಕ್ಷಪಾತಿ ಆಗಿದ್ದಾರಾ ಎನ್ನುವ ಅನುಮಾನ ಬರುತ್ತದೆ. ಹೀಗಾಗಿ, ಸದನ ಕಲಾಪ ಬಹಿಷ್ಕರಿಸಿ, ಸಭಾತ್ಯಾಗ ಮಾಡಿದ್ದೇವೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿಯವರಿಗೆ ವಿರೋಧ ಪಕ್ಷಗಳ ಬಗ್ಗೆ ಗೌರವ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದವರು ವಿರೋಧ ಪಕ್ಷದವರ ಮಾತಿಗೆ ಬೆಲೆ ಕೊಡುತ್ತಾರೆ. ಈ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ಜನಗಳ ಮುಂದೆ ಹೋಗುತ್ತೇವೆ' ಎಂದರು.

'ಮಾರ್ಚ್ 27 - 28 ರವರೆಗೆ ಸದನ ನಡೆಸಬೇಕು. ಬಜೆಟ್ ಮೇಲೆ ಚರ್ಚೆ, ಮಸೂದೆಗಳನ್ನು ಅನುಮೋದಿಸುವುದು ಸರ್ಕಾರದ ಇರಾದೆ ಆಗಿತ್ತು. ಬಜೆಟ್ ಮೇಲೆ ಚರ್ಚೆ ಅಪೂರ್ಣ ಆಗಿದೆ. ಕಾಂಗ್ರೆಸ್, ಜೆಡಿಎಸ್ ನಲ್ಲಿ ಇನ್ನೂ ಬಹಳಷ್ಟು ಜನ ಮಾತನಾಡುವವರಿದ್ದಾರೆ. ಇಲಾಖಾ ಬೇಡಿಕೆಗಳ ಮೇಲೆ ಚರ್ಚೆ ಆಗಬೇಕಿದೆ. ಸಂವಿಧಾನದ ಚರ್ಚೆಗೆ ಹೆಚ್ಚು ಸಮಯ ಮೀಸಲಿಟ್ಟೆವು. ಅಲ್ಲದೆ, ಬೇರೆ ಕಲಾಪಗಳು ನಡೆದಿವೆ ಎಂದರು.

ADVERTISEMENT

13 ಬಜೆಟ್ ಮಾಡಿದಾಗಲೂ ಪೂರ್ಣ ಲೇಖಾನುದಾನ ಪಡೆದಿಲ್ಲ. ಜೂನ್ ಅಥವಾ ಜುಲೈನಲ್ಲಿ ಚರ್ಚಿಸೋಣ, ಜನರ ತೆರಿಗೆ ಹಣ ಸದ್ಬಳಕೆ ಆಗುತ್ತಿದೆಯೋ ಇಲ್ಲವೋ ಚರ್ಚೆ ಆಗಬೇಕು ಎಂದೆವು. ಆದರೆ, ಇದಕ್ಕೆ ಒಪ್ಪದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕು ಎಂದು ಮೊಂಡುತನ ಮಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸದನ ಮುಂದೂಡಲೇಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದರು.

ಮಾರಕ ಕಾಯಿಲೆ, ಜನರ ಸಾವು-ನೋವಿನ ಪ್ರಶ್ನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಆವಶ್ಯಕ. ಸೋಮವಾರವೇ ಧನವಿನಿಯೋಗ ಮಸೂದೆ ಅನುಮೋದನೆ ಕೊಡಲು ಸಿದ್ಧ. ಪೂರಕ ಅಂದಾಜುಗಳಿಗೂ ಅನುಮೋದನೆ ಪಡೆದುಕೊಳ್ಳಿ. ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಅನಿರ್ದಿಷ್ಟ ಅವಧಿಗೆ ಮುಂದೂಡಿ ಎಂದಿದ್ದೆವು ಎಂದು ಸಲಹೆ ನೀಡಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.

ಧನವಿನಯೋಗ ಮಸೂದೆ ಬಿಟ್ಟು ಬೇರೆ ಯಾವುದೇ ಮಸೂದೆಗಳನ್ನು ತರಬೇಡಿ. ಪ್ರಮುಖ ಮಸೂದೆಗಳು ಚರ್ಚೆ ಆಗದೆ ಅನುಮೋದಿಸುವುದು ಸರಿಯಲ್ಲ. ಆದರೆ, ಅಷ್ಟು ಸಮಯಾವಕಾಶ ಇಲ್ಲ. ಹೀಗಾಗಿ ಬೇಡ ಎಂದಿದ್ದೆವು. ಪಂಚಾಯತಿಗಳ ಅಧ್ಯಕ್ಷರ ಅವಧಿ ಮೊದಲು 30 ತಿಂಗಳಿತ್ತು. ಪಂಚಾಯತಿ ತಿಳಿದುಕೊಂಡು ಜನರಿಗೆ ಆಡಳಿತ ತಲುಪಿಸಲು ಇಷ್ಟು ಸಮಯ ಸಾಲುವುದಿಲ್ಲ. ಎರಡು ವರ್ಷ ಅವಿಶ್ವಾಸ ನಿರ್ಣಯ ಮಂಡಿಸಬಾರದು ಎಂದು ನಿಯಮ ಇತ್ತು. ಈಗ ಮಸೂದೆ ಮೂಲಕ ಇದನ್ನೆಲ್ಲ ಬದಲಿಸಲು ಹೊರಟಿದ್ದಾರೆ. ಯಾರೂ ಕೇಳಿರಲಿಲ್ಲ. ಮುಂಬರುವ ಚುನಾವಣೆಗಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟವರು ನಾವು.ಇಡೀ ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಳಿಸಲು ಹೊರಡಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಬಿಜೆಪಿಯವರಿಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿಲ್ಲ. ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರು ಎಂದೂ ದೂರಿದರು.

ಕೊರೊನಾ ತಹಬದಿಗೆ ಬಂದ ಬಳಿಕ ಚುನಾವಣೆ ಮಾಡಿ ಎಂದಾಗ ಸರ್ಕಾರ ಒಪ್ಪಿಕೊಂಡಿತ್ತು. ಈಗೇಕೆ ಈ ಮಸೂದೆ? ತುರ್ತು ಇರುವ ಮಸೂದೆಗಳ ಮಂಡನೆ, ಚರ್ಚೆ, ಅನುಮೋದನೆ ಬದಲು ಸುಗ್ರೀವಾಜ್ಞೆ ಹೊರಡಿಸಿ ಎಂದು ಸಲಹೆ ಕೊಟ್ಟಿದ್ದೇವೆ ಎಂದೂ ಸಿದ್ದರಾಮಯ್ಯ ವಿವರಿಸಿದರು.

ಹಬ್ಬ ಇದೆ. ಜನ ಹಬ್ಬ ಮಾಡಬೇಕಿದೆ. ವ್ಯಾಪಾರ ಮಾಡಲಿ. ಅದಕ್ಕಾಗಿ ಲಾಠಿ ಪ್ರಹಾರ ಬೇಡ. ಕೊರೊನಾ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಆರೋಗ್ಯ ಸಚಿವರಿಗೂ ವೈದ್ಯಕೀಯ ಶಿಕ್ಷಣ ಸಚಿವರ ಮಧ್ಯೆಸಮನ್ವಯತೆ ಇಲ್ಲ. ಮುಂದಾಗುವುದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ. ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿದೆ. ಬಹುಮತ ಇಲ್ಲದ ಅನೈತಿಕ ಸರ್ಕಾರ. ರಾಜ್ಯದ ಜನ ಇವರನ್ನು ನಂಬಿ 25 ಸಂಸದರನ್ನು ಗೆಲ್ಲಿಸಿಕೊಟ್ಟರು. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ರಾಜ್ಯ ಹಾಳು ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದಾರೆ. ಮೂರು ವರ್ಷದಲ್ಲಿ ಕರ್ನಾಟಕವು 20 ವರ್ಷ ಹಿಂದಕ್ಕೆ ಹೋಗಲಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಶಾಸಕರಾದ ಈಶ್ವರ ಖಂಡ್ರೆ, ಎಚ್.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಜಿ. ಪರಮೇಶ್ವರ, ಅಜಯ್ ಸಿಂಗ್, ರಾಮಲಿಂಗಾರೆಡ್ಡಿ, ರಮೇಶಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.