ADVERTISEMENT

ಕುತೂಹಲ ಮೂಡಿಸಿದ ಎಸ್‌.ಎಂ. ಕೃಷ್ಣ ಹಾಗೂ ಸಿದ್ಧರಾಮಯ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 11:42 IST
Last Updated 3 ಫೆಬ್ರುವರಿ 2019, 11:42 IST
   

ಕೋಲಾರ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಲವು ವರ್ಷಗಳ ನಂತರ ಇಲ್ಲಿ ಭಾನುವಾರ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದರು.

ಜಿಲ್ಲಾ ಕೇಂದ್ರದಲ್ಲಿ ನಡೆದ ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಈ ನಾಯಕರು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಮೇಲೆ ಮುನಿಸಿಕೊಂಡಿದ್ದ ಕೃಷ್ಣ ಸಾಕಷ್ಟು ಬಾರಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಿನಿಂದ ಸಿದ್ದರಾಮಯ್ಯ ಅವರು ಕೃಷ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಉಭಯ ನಾಯಕರ ನಡುವಿನ ಮುನಿಸು ದೊಡ್ಡದಾಗುತ್ತಲೇ ಸಾಗಿ ಅಂತಿಮವಾಗಿ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಪಾಳಯ ಸೇರಿದರು.

ADVERTISEMENT

ಈ ಬೆಳವಣಿಗೆ ನಂತರ ಪರಸ್ಪರರು ಭೇಟಿಯಾಗಿರಲಿಲ್ಲ. ಹಲವು ವರ್ಷಗಳ ನಂತರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮುಖಾಮುಖಿಯಾದ ನಾಯಕರು ಪರಸ್ಪರ ಕೈ ಕುಲುಕಿ ಒಟ್ಟಿಗೆ ಚಹಾ ಸೇವಿಸಿದರು. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲೂ ಅಕ್ಕಪಕ್ಕ ಕುಳಿತು ಚರ್ಚೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ, 'ಸದ್ಯ ನಾನು ರಾಜಕೀಯ ಬೆಳವಣಿಗೆಗಳಿಂದ ದೂರ ಉಳಿದಿದ್ದೇನೆ. ನನ್ನ ಭವಿಷ್ಯವೇ ಗೊತ್ತಿಲ್ಲ, ಇನ್ನು ಸಮ್ಮಿಶ್ರ ಸರ್ಕಾರದ ಭವಿಷ್ಯ ಹೇಗೆ ಹೇಳಲಿ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕುವ ಬಗ್ಗೆ ಆಯಾ ಪಕ್ಷಗಳ ಅಧ್ಯಕ್ಷರು ತೀರ್ಮಾನಿಸುತ್ತಾರೆ. ಕೇಂದ್ರ ಸರ್ಕಾರ ಸಮರ್ಪಕ ಬಜೆಟ್ ಕೊಟ್ಟಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.