ADVERTISEMENT

ಅಧ್ಯಕ್ಷ ಹುದ್ದೆ ನಿಭಾಯಿಸಲಾಗದೇ ವಿಶ್ವನಾಥ್‌ ಪಲಾಯನ: ಸಿದ್ದರಾಮಯ್ಯ ಟ್ವೀಟ್‌ 

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 9:12 IST
Last Updated 4 ಜುಲೈ 2019, 9:12 IST
   

ಬೆಂಗಳೂರು: ತಮ್ಮನ್ನು ಸದಾ ವಿಮರ್ಶೆಗೆ ಒಳಪಡಿಸುವ ಎಚ್‌.ವಿಶ್ವನಾಥ್‌ ಅವರ ಬಗ್ಗೆ ಹೆಚ್ಚೇನೂ ಮಾತನಾಡದ ಸಿದ್ದರಾಮಯ್ಯ ಗುರುವಾರ ಟ್ವೀಟ್‌ ಮೂಲಕ ನೇರವಾಗಿಯೇ ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆ ಸೋಲು ಮತ್ತುಅಸಮಾಧಾನಗಳ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹುದ್ದೆ ತೊರೆದಿರುವ ವಿಶ್ವನಾಥ್‌ ಅವರನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ತಮಗೆ ಸಿಕ್ಕ ಅಧ್ಯಕ್ಷ ಹುದ್ದೆಯನ್ನು ಸರಿಯಾಗಿ 6 ತಿಂಗಳು ಕೂಡ ನಿಭಾಯಿಸಲಾಗದೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿರುವ ಹೆಚ್.ವಿಶ್ವನಾಥ್ ಅವರು ಸದಾ ಇತರರ ಸಾಮರ್ಥ್ಯವನ್ನು ಪ್ರಶ್ನಿಸುತ್ತ ತಮ್ಮ ದೌರ್ಬಲ್ಯವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಅವರ ಬಗ್ಗೆ ನನಗೆ ಅನುಕಂಪವಿದೆ,’ ಎಂದು ಅವರು ಕುಹಕವಾಡಿದ್ದಾರೆ.

ಲೋಕಸಭೆ ಚುನಾವಣೆ ಸೋಲಿನ ನಂತರ ವಿಶ್ವನಾಥ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರು. ಪಕ್ಷದ ವರಿಷ್ಠ ಎಚ್‌.ಡಿ ದೇವೇಗೌಡರು ವಿಶ್ವನಾಥ್‌ ರಾಜೀನಾಮೆಯನ್ನು ಆರಂಭದಲ್ಲಿ ಅಂಗೀಕರಿಸಿರಲಿಲ್ಲ. ಅಧ್ಯಕ್ಷ ಸ್ಥಾನದಿಂದ ವಿಮಕ್ತಿಗೊಳಿಸದೇ ಹೋದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಶ್ವನಾಥ್‌ ಎಚ್ಚರಿಕೆ ನೀಡಿದ ನಂತರ ಗುರುವಾರ ಸಕಲೇಶಪುರ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ದೇವೇಗೌಡರು ನೇಮಕ ಮಾಡಿದರು.

ಅತ್ತ ಎಚ್.ಕೆ ಕುಮಾರಸ್ವಾಮಿ ಅವರು ಜೆಡಿಎಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಲೇ ಇತ್ತ ಸಿದ್ದರಾಮಯ್ಯ ಅವರು ನಿರ್ಗಮಿತ ಅಧ್ಯಕ್ಷ ವಿಶ್ವನಾಥ್‌ ಅವರನ್ನು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.