ADVERTISEMENT

ಕೂಡಲಸಂಗಮದಲ್ಲಿ ಸಿದ್ಧೇಶ್ವರ ‌ಸ್ವಾಮೀಜಿ ಚಿತಾಭಸ್ಮ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 15:51 IST
Last Updated 8 ಜನವರಿ 2023, 15:51 IST
  ಕೃಷ್ಣಾ, ಮಲಪ್ರಭಾ ನದಿಗಳ ಸಂಗಮ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪದ ಮುಂಭಾಗದಲ್ಲಿ ಸಿದ್ಧೇಶ್ವರಶ್ರೀಗಳ ಚಿತಾಭಸ್ಮವನ್ನು ಬಸವಲಿಂಗ ಸ್ವಾಮೀಜಿ ಭಾನುವಾರ ವಿಸರ್ಜಿಸಿದರು
ಕೃಷ್ಣಾ, ಮಲಪ್ರಭಾ ನದಿಗಳ ಸಂಗಮ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪದ ಮುಂಭಾಗದಲ್ಲಿ ಸಿದ್ಧೇಶ್ವರಶ್ರೀಗಳ ಚಿತಾಭಸ್ಮವನ್ನು ಬಸವಲಿಂಗ ಸ್ವಾಮೀಜಿ ಭಾನುವಾರ ವಿಸರ್ಜಿಸಿದರು   

ಕೂಡಲಸಂಗಮ/ಗೋಕರ್ಣ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರಶ್ರೀಗಳ ಚಿತಾಭಸ್ಮವನ್ನು ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಕೂಡಲಸಂಗಮ ಹಾಗೂ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.

ವಿಜಯಪುರದಿಂದ ಭಾನುವಾರ ನಸುಕಿನಲ್ಲಿ ಶ್ರೀಗಳ ಚಿತಾಭಸ್ಮ ಹೊತ್ತ ಅಲಂಕೃತ ವಿಶೇಷ ವಾಹನ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ಬರುತ್ತಿದ್ದಂತೆ ಭಕ್ತರು, ಗ್ರಾಮಸ್ಥರು ಸ್ವಾಗತಿಸಿದರು. ಕೃಷ್ಣಾ, ಮಲಪ್ರಭಾ ನದಿ ದಡದಲ್ಲಿ ಸಿದ್ಧೇಶ್ವರಶ್ರೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶೇಷ ದೋಣಿ ಮೂಲಕ ಬಸವಣ್ಣನ ಐಕ್ಯ ಮಂಟಪದ ಮುಂಭಾಗಕ್ಕೆ ಸಾಗಿ ಚಿತಾಭಸ್ಮವನ್ನು ನದಿಗೆ ವಿಸರ್ಜಿಸುತ್ತಿದ್ದಂತೆ ‘ಓಂ ನಮಃ ಶಿವಾಯ, ಸಿದ್ಧೇಶ್ವರ ಶ್ರೀಗಳಿಗೆ ಜಯವಾಗಲಿ’ ಎಂಬ ಘೋಷಣೆಗಳು ಮೊಳಗಿದವು. ನದಿಯ ದಡದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು, ರಾಜಕಾರಣಿಗಳು, ಸಾವಿರಾರು ಭಕ್ತರು ಸೇರಿದ್ದರು.

ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ವಿವಿಧ ಸ್ವಾಮೀಜಿಗಳು, ಶಾಸಕರಾದ ದೊಡ್ಡನಗೌಡ ಪಾಟೀಲ, ಶಿವಾನಂದ ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಇದ್ದರು.

ADVERTISEMENT

ಗೋಕರ್ಣ ವರದಿ: ಆಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಸುಮಾರು 500ಕ್ಕೂ ಹೆಚ್ಚು ವಾಹನದಲ್ಲಿ ಮೂರು ಸಾವಿರಕ್ಕೂ ಅಧಿಕ ಭಕ್ತರು, ಶಿಷ್ಯರು ಸಂಜೆ ಗೋಕರ್ಣಕ್ಕೆ ಆಗಮಿಸಿದ್ದರು. ‘ಸಿದ್ಧೇಶ್ವರಶ್ರೀಗಳ ಇಚ್ಛೆಯಂತೆ ಅವರ ಅಸ್ಥಿ ಮತ್ತು ಚಿತಾಭಸ್ಮವನ್ನು ಗೋಕರ್ಣದ ಅರಬ್ಬೀ ಸಮುದ್ರದಲ್ಲಿ ವಿಸರ್ಜಿಸಲಾಯಿತು’ ಎಂದು ಬಸವಲಿಂಗ ಶ್ರೀಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.