ಸಿಗಂದೂರು ಕೇಬಲ್ ಸೇತುವೆ
ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ (ಸಿಗಂದೂರು) ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ಇದೇ ಜುಲೈ 14ರಂದು ಲೋಕಾರ್ಪಣೆಯಾಗಲಿದೆ.
ಸೇತುವೆಯ ಬಗ್ಗೆ ಹಾಗೂ ನಿರ್ಮಾಣದ ಬಗ್ಗೆ ರಾಜ್ಯ ಬಿಜೆಪಿ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡು ಅತ್ಯಾಧುನಿಕ ಸಿಗಂದೂರು ಕೇಬಲ್ ಸೇತುವೆ ಎಂದು ಹೇಳಿದೆ.
ಈಗಾಗಲೇ ಸೇತುವೆ ಉದ್ಘಾಟನೆಗೆ ತಯಾರಿ ನಡೆದಿದ್ದು ಸೇತುವೆ ನಿರ್ಮಾಣದ ಕ್ರೆಡಿಟ್ ವಾರ್ ಶಿವಮೊಗ್ಗ ಜಿಲ್ಲೆಯಲ್ಲಿ ಜೋರಾಗಿ ನಡೆದಿದೆ.
ಸೇತುವೆ ಉದ್ಘಾಟನೆಯ ಸಭಾ ಕಾರ್ಯಕ್ರಮ ಸಾಗರ ನಗರದ ನೆಹರೂ ಮೈದಾನದಲ್ಲಿ ನಡೆಯುವುದು ನಿಶ್ಚಯವಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ಬುಧವಾರ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಸಭೆ ನಡೆಯುವ ಸ್ಥಳವನ್ನು ಅಂತಿಮಗೊಳಿಸಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಲ್ಹಾದ ಜೋಶಿ ಅವರು ಸಭೆಯಲ್ಲಿ ಭಾಗವಹಿಸುವುದು ಖಚಿತವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೂಡ ಆಗಮಿಸುವ ಸಾಧ್ಯತೆಯಿದೆ.
ಕೇಂದ್ರ ಸಚಿವರು ಜುಲೈ 14ರಂದು ಬೆಳಿಗ್ಗೆ ಸಿಗಂದೂರು ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿ ಸೇತುವೆಯನ್ನು ಉದ್ಘಾಟಿಸಿ, ಮಧ್ಯಾಹ್ನ 12ಕ್ಕೆ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಸೇತುವೆ ನಿರ್ಮಾಣದ ವಿವರಗಳು
ಅಂಬಾರಗೋಡ್ಲು ಮತ್ತು ಕಳಸವಳ್ಳಿ (ಸಿಗಂದೂರು) ಸೇತುವೆಯ ವಿವರಗಳು..
* ಟೆಂಡರ್ ಮೊತ್ತ - ₹473 ಕೋಟಿ
* ಕಾಮಗಾರಿ ಪ್ರಾರಂಭವಾದ ದಿನ - 2019ರ ಡಿಸೆಂಬರ್ 12
* ಕಾಮಗಾರಿ ಮುಕ್ತಾಯದ ದಿನ- 2025ರ ಜುಲೈ 14
* ಕಾಮಗಾರಿ ನಿರ್ವಹಿಸಿದ ಏಜೆನ್ಸಿ - ದಿಲೀಪ್ ಬಿಲ್ಡ್ ಕಾನ್
* ಸೇತುವೆಯ ಉದ್ದ - 2125 ಮೀಟರ್
* ಸೇತುವೆಯ ಅಗಲ - 16 ಮೀಟರ್ (ಜೊತೆಗೆ ಫುಟ್ಪಾತ್ 2x1.5 ಮೀಟರ್)
* ಸಂಪರ್ಕ ರಸ್ತೆ - 1.05 ಕಿ.ಮೀ ನಿಂದ 3 ಕಿ.ಮೀ
* ತಳಪಾಯ- 164 ಪೈಲ್ಸ್
* ಉಕ್ಕಿನ ಕೇಬಲ್ ಉದ್ದ - 740 ಮೀಟರ್
* ಕೇಬಲ್ ಎತ್ತರ– 38.50 ಮೀಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.