ADVERTISEMENT

ಎನ್‌ಐಎಯಿಂದ ಶಿರಸಿ ಯುವಕನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:30 IST
Last Updated 27 ಸೆಪ್ಟೆಂಬರ್ 2020, 20:30 IST
ಎನ್‌ಐಎ
ಎನ್‌ಐಎ   

ಶಿರಸಿ: ದೇಶದ ವಿವಿಧ ಭಾಗಗಳಲ್ಲಿ ಬಂಧನಕ್ಕೊಳಗಾಗಿರುವ ಉಗ್ರರ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಶಿರಸಿ ತಾಲ್ಲೂಕಿನ ಅರೆಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರ ಪುತ್ರನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಶನಿವಾರ ಸಂಜೆ ವಿಚಾರಣೆ ನಡೆಸಿದರು.

ಇತ್ತೀಚೆಗಷ್ಟೇ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸಂಶಯದಲ್ಲಿ 9 ಜನರನ್ನು ಪ್ರತ್ಯೇಕವಾಗಿ ತನಿಖಾ ದಳದವರು ಬಂಧಿಸಿದ್ದರು. ಇವರ ಜೊತೆ ನಂಟು ಹೊಂದಿರುವವರ ವಿಚಾರಣೆ ನಡೆಸಲಾಗುತ್ತಿದೆ. ಅರೆಕೊಪ್ಪದ ಯುವಕನ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ಭಯೋತ್ಪಾದನಾ ಚಟುವಟಿಕೆಯಲ್ಲಿ ಬಳಕೆಯಾಗಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆದಿದೆ.

ಇಬ್ಬರು ಅಧಿಕಾರಿಗಳನ್ನೊಳಗೊಂಡ ತಂಡವು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿತು.

ADVERTISEMENT

ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಯುವಕನನ್ನು ವಶಕ್ಕೆ ಪಡೆದಿಲ್ಲ ಎಂಬುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದರು.

‘ತನಿಖಾ ದಳದವರು ವಿಚಾರಣೆ ನಡೆಸಿರುವುದು ನಿಜ. ಆದರೆ ಸ್ಥಳೀಯವಾಗಿ ಯಾವುದೇ ಪ್ರಕರಣ ದಾಖಲಿಸಿಲ್ಲ.‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ವಿಚಾರಣೆ ಕೈಗೊಂಡಿರಬಹುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

ಕೆಲದಿನಗಳ ಹಿಂದಷ್ಟೇ ರಾಷ್ಟ್ರೀಯ ಗುಪ್ತಚರ ದಳದ ಅಧಿಕಾರಿಗಳ ತಂಡ ಬನವಾಸಿಯ ಯುವಕನನ್ನು ಉಗ್ರರ ಜೊತೆ ನಂಟು ಹೊಂದಿದ್ದ ಸಂಶಯದ ಮೇಲೆ ವಿಚಾರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.