ADVERTISEMENT

ಲಿಂಗಾಯತ ಧರ್ಮ ಹೋರಾಟ ನಿಲ್ಲದು: ಎಸ್‌.ಎಂ.ಜಾಮದಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 19:12 IST
Last Updated 13 ಜನವರಿ 2023, 19:12 IST

ಕೂಡಲಸಂಗಮ (ಬಾಗಲಕೋಟೆ): ‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ಯಾವ ಧರ್ಮವನ್ನೂ ಒಡೆದಿಲ್ಲ. ಮತಗಟ್ಟೆ ರಾಜಕಾರಣದಿಂದಾಗಿ ಹಾಳಾಯಿತು. ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೆ ಕಾನೂನು ಹೋರಾಟ ಮುಂದುವರಿಯಲಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಹೇಳಿದರು.

ಕೂಡಲಸಂಗಮದ ಬಸವ ಧರ್ಮ ಪೀಠ ಆವರಣದಲ್ಲಿ ಶುಕ್ರವಾರ 36ನೇ ಶರಣ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮ ಬೇಡಿಕೆಯ ಆಗ್ರಹ ಇರುವುದು ಯಾವುದೇ ರಾಜಕೀಯ ಪಕ್ಷದ ಜತೆಗಲ್ಲ; ಸರ್ಕಾರದೊಂದಿಗೆ’ ಎಂದರು.

‘ತೆಲಂಗಾಣ, ಮಹಾರಾಷ್ಟ್ರದ ಸಂಸದರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಸಂಸತ್ತಿನಲ್ಲಿ ಮಾತನಾಡುತ್ತಾರೆ. ರಾಜ್ಯದ 28 ಜನ ಸಂಸದರಿಗೆ ಏನಾಗಿದೆ’ ಎಂದು ಪ್ರಶ್ನಿಸಿದರು.

ADVERTISEMENT

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಶರಣ ಮೇಳ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ತೇಜಸ್ವಿನಿ ಅನಂತಕುಮಾರ ಅವರಿಗೆ ₹1 ಲಕ್ಷ ನಗದನ್ನು ಒಳಗೊಂಡಿರುವ ‘ಬಸವಾತ್ಮಜೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪರ್ಯಾಯ ಮೇಳ: ಕೂಡಲಸಂಗಮ ಸಮೀಪದ ಹೂವನೂರ ಬಳಿ ನಡೆದ ಪರ್ಯಾಯ ಸ್ವಾಭಿಮಾನಿ ಶರಣ ಮೇಳವನ್ನು ಸ್ವಾಭಿಮಾನಿ ಶರಣ ಮೇಳ ಸಮಿತಿಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು. ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.