ರಾಮದುರ್ಗ: ಗ್ರಾಮಸ್ಥರು ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಜಮ್ಮು ಕಾಶ್ಮೀರದಲ್ಲಿ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮದುರ್ಗ ತಾಲ್ಲೂಕಿನ ತೋಟಗಟ್ಟಿ ಗ್ರಾಮದ ವಿಠ್ಠಲ ಕಟಕೋಳ ಕುಟುಂಬದವರು ಆರೋಪಿಸಿದ್ದಾರೆ.
ಯೋಧನ ತಂದೆ ಮಲ್ಲಿಕಾರ್ಜುನ ಈ ಕುರಿತು ಮಾಧ್ಯಮಗಳ ಎದುರು ದೂರಿದ್ದಾರೆ. ಮೂರು ವರ್ಷಗಳಿಂದಲೂ ಗ್ರಾಮಸ್ಥರು ನಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಮುಂದಿನ ತಿಂಗಳು ವಿಠ್ಠಲ ಸೇರಿದಂತೆ ಇಬ್ಬರು ಮಕ್ಕಳ ನಿಶ್ಚಿತಾರ್ಥ ಇದೆ. ಅರ್ಚಕರು ನಿಶ್ಚಿತಾರ್ಥ ನೆರವೇರಿಸಲು ಒಪ್ಪುತ್ತಿಲ್ಲ. ಇದರಿಂದಾಗಿ ನಮಗೆ ಬಹಳ ನೋವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
2017ರಲ್ಲೂ ಜಿಲ್ಲಾಧಿಕಾರಿ, ಎಸ್ಪಿಗೆ ಕುಟುಂಬದವರು ಈ ಬಗ್ಗೆ ದೂರು ನೀಡಿದ್ದರು. ಆಗ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಂಧಾನ ನಡೆಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಗ್ರಾಮದ ಜನರು ನಮ್ಮೊಂದಿಗೆ ಆತ್ಮೀಯತೆ ಕಳೆದುಕೊಂಡರು. ನಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಸಾಮಾಜಿಕವಾಗಿ ಬಹಿಷ್ಕರಿಸಿದಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿರುವ ತಹಶೀಲ್ದಾರ್ ಗಿರೀಶ ಸ್ವಾದಿ, ಯೋಧನ ಕುಟುಂಬದವರು ಹಾಗೂ ಗ್ರಾಮದ ಮುಖಂಡರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ತಹಶೀಲ್ದಾರ್ ಎದುರು ಯೋಧನ ಕುಟುಂಬದವರು ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.