ಬೆಂಗಳೂರು: ನವ ಭಾರತದ ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೇ ಸಾಮಾಜಿಕ ಹೊಣೆಗಾರಿಕೆ ಮತ್ತು ಸಮುದಾಯ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯ ಬೋಧನಾ ವಿಷಯವಾಗಿ ಅಳವಡಿಸಲು ಸೂಚಿಸಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಇದಕ್ಕಾಗಿ ಯುಜಿಸಿ ಕರಡು ರಾಷ್ಟ್ರೀಯ ಪಠ್ಯ ರಚನಾ ಕ್ರಮ ಮತ್ತು ಮಾರ್ಗಸೂಚಿಯನ್ನುರೂಪಿಸಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದೆ.
ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆ ತನ್ನ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಮುದಾಯ ಪಾಲ್ಗೊಳ್ಳುವಿಕೆ ವಿಚಾರದಲ್ಲಿ ಕೋರ್ಸ್ ಒಂದನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಗ್ರಾಮೀಣ ಬದುಕನ್ನು ಗೌರವಿಸುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ ಎಂದು ಕರಡು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ವಿಷಯದಲ್ಲಿ ಎರಡು ಕ್ರೆಡಿಟ್ ಸಿಗುತ್ತದೆ. ತರಗತಿಗೆ 1 ಕ್ರೆಡಿಟ್, ಕ್ಷೇತ್ರ ಭೇಟಿಗೆ 1 ಕ್ರೆಡಿಟ್ ನೀಡಲಾಗುತ್ತದೆ. ಇದು ಜಾರಿಗೆ ಬಂದ ಬಳಿಕ ಗ್ರಾಮೀಣ ಜನಜೀವನ, ಆರ್ಥಿಕತೆಯನ್ನುಅರ್ಥ ಮಾಡಿಕೊಳ್ಳುವುದು, ಪಂಚಾಯಿತಿಗಳಂತಹ ಗ್ರಾಮೀಣ ಸಂಸ್ಥೆಗಳ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಧ್ಯಯನ ನಡೆಸುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಲಿದೆ.
ಕೋರ್ಸ್ ಕೊನೆಗೊಂಡಾಗ ವಿದ್ಯಾರ್ಥಿಗಳು ಗ್ರಾಮೀಣ ಜನರ ಜನಜೀವನ, ಸಂಸ್ಕೃತಿ, ಸಾಮಾಜಿಕ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ, ಸ್ಥಳೀಯ ಜನರೊಂದಿಗೆ ಬಾಂಧವ್ಯ ವೃದ್ಧಿಸುತ್ತದೆ, ಭಾರತದ ಏಳಿಗೆಗಾಗಿ ಸ್ಥಳೀಯರು ನೀಡುತ್ತಿರುವ ಗಮನಾರ್ಹ ಕೊಡುಗೆಯನ್ನು ಪ್ರಶಂಸಿಸುವುದು ಸಾಧ್ಯವಾಗುತ್ತದೆ ಎಂದು ಯುಜಿಸಿ ಅಭಿಪ್ರಾಯಪಟ್ಟಿದೆ.
ಯಶಸ್ಸು ಖಂಡಿತ: ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ಸ್, ಗೈಡ್ಸ್ನಂತಹ ಚಟುವಟಿಕಗಳೂ ಇದೇ ಉದ್ದೇಶದಿಂದ ರೂಪಿತವಾದವುಗಳು. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಅವುಗಳನ್ನು ಕಡ್ಡಾಯಗೊಳಿಸಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಿಲ್ಲೊಂದು ಚಟುವಟಿಕೆಯಲ್ಲಿ ಇರಲೇಬೇಕು ಎಂಬ ನಿಯಮ ರೂಪಿಸಿದ್ದರೆ ಸಮಸ್ಯೆಯೇ ಇರಲಿಲ್ಲ. ಇದೇ ಕಾರಣಕ್ಕೆ ಯುಜಿಸಿಯಿಂದ ಇದೀಗ ಈ ಹೊಸ ಆದೇಶ ಬಂದಿದ್ದು, ಇದು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.