ADVERTISEMENT

ಕಾಂಗ್ರೆಸ್‌ ಅವಧಿಯ ಸೋಲಾರ್‌ ಘಟಕ ಅಕ್ರಮ ಆರೋಪ: ನ್ಯಾಯಾಂಗ ತನಿಖೆ?

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 21:14 IST
Last Updated 6 ಅಕ್ಟೋಬರ್ 2022, 21:14 IST
SOLAR SCAM
SOLAR SCAM   

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಪಾವಗಡ ಸೌರವಿದ್ಯುತ್‌ ಉತ್ಪಾದನಾ ಘಟಕಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಆಧರಿಸಿ ನ್ಯಾಯಾಂಗ ತನಿಖೆ ನಡೆಸಲು
ಸರ್ಕಾರ ಸಿದ್ಧತೆ ನಡೆಸಿದ್ದು, ಸದ್ಯವೇ ಆದೇಶ ಹೊರಬೀಳುವ ಸಾಧ್ಯತೆ ಇದೆ.

‘ಭ್ರಷ್ಟಾಚಾರದ ವಿಷಯವನ್ನು ಮುಂದಿಟ್ಟುಕೊಂಡಿರುವ ಕಾಂಗ್ರೆಸ್‌ ನಾಯಕರು, ಬಿಜೆಪಿ ವಿರುದ್ಧ ಆಕ್ರಮಣಕಾರಿ ಪ್ರಹಾರ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಅವಧಿಯ ಸೌರ ಉತ್ಪಾದನಾ ಘಟಕಗಳ
ಹಂಚಿಕೆಯ ಬಗ್ಗೆ ತನಿಖೆ ನಡೆಸಲು ತಮ್ಮ ಸರ್ಕಾರವೇ ಮೀನಮೇಷ ಎಣಿಸುತ್ತಿರುವ ಬಗ್ಗೆ ಬಿಜೆಪಿಯ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದರು. ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆಯ
ಆದೇಶ ಹೊರಡಿಸಲು ತಯಾರಿ ನಡೆಸಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆಗಾಗಿ ಕರೆದ ಆನ್‌ಲೈನ್ ಅರ್ಜಿ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ವ್ಯಕ್ತ
ವಾಗಿತ್ತು. ₹2,100 ಕೋಟಿ ಮೊತ್ತದ 300 ಮೆಗಾ ವಾಟ್‌ ಸಾಮರ್ಥ್ಯದ ಸೌರವಿದ್ಯುತ್‌ ಉತ್ಪಾದನಾ ಘಟಕಗಳ ಹಂಚಿಕೆ ಪ್ರಕ್ರಿಯೆಯನ್ನು ಕೇವಲ ಎಂಟೇ ನಿಮಿಷದಲ್ಲಿ ಮುಕ್ತಾಯ
ಗೊಳಿಸಲಾಗಿತ್ತು. ಆದರೆ, ಅಂದು ಇಂಧನ ಸಚಿವರಾಗಿದ್ದ
ಡಿ.ಕೆ. ಶಿವಕುಮಾರ್ ಅವರು, 26 ಸಾವಿರ ಅರ್ಜಿ ಬಂದಿದೆ. ಈ ಪೈಕಿ 295 ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು.

ADVERTISEMENT

ಆದರೆ, ಇ–ಆಡಳಿತ ಇಲಾಖೆ ಕೇವಲ ಎಂಟು ನಿಮಿಷದಲ್ಲಿ 265 ಅರ್ಜಿ ಸ್ವೀಕಾರ ಆಗಿದೆ ಎಂದು ಹೇಳಿದ್ದು ಸಾಕಷ್ಟು ಸಂಶಯಗಳಿಗೆ ಕಾರಣವಾಯಿತು. ಈ ಹಂಚಿಕೆಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುಟುಂಬದ ಮೂವರಿಗೆ ಅವಕಾಶ ಸಿಕ್ಕಿತ್ತು. ಹೈದರಾಬಾದ್‌ ಮೂಲದ ಕೆಲ ಕಂಪನಿಗಳು ಅರ್ಜಿ ಸ್ವೀಕಾರಕ್ಕೆ ಮುನ್ನ ಭೂಮಿ ಖರೀದಿ ಮಾಡಿದ್ದೂ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯೊಳಗೆ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.