ADVERTISEMENT

ಪಾವತಿಯಾಗದ ಗೌರವಧನ

ಪಿಯು ಪರೀಕ್ಷೆ: ವಿಶೇಷ ಜಾಗೃತ ದಳದವರ ಅಳಲು

ಎಂ.ಜಿ.ಬಾಲಕೃಷ್ಣ
Published 15 ಡಿಸೆಂಬರ್ 2019, 20:00 IST
Last Updated 15 ಡಿಸೆಂಬರ್ 2019, 20:00 IST
   

ಬೆಂಗಳೂರು: ದ್ವಿತೀಯ ಪಿಯು ಅಂತಿಮ ಪರೀಕ್ಷೆ ಹತ್ತಿರವಾಗುತ್ತಿದ್ದು, ಕಳೆದ ವರ್ಷ ಪರೀಕ್ಷೆ ವೇಳೆ ವಿಶೇಷ ಜಾಗೃತ ದಳದಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಗೌರವಧನವನ್ನು ಇನ್ನೂ ಪಾವತಿ ಮಾಡಿಲ್ಲ ಎಂದು ಹಲವರು ಅಳಲುತೋಡಿಕೊಂಡಿದ್ದಾರೆ.

ವಿಶೇಷ ಜಾಗೃತ ದಳದಲ್ಲಿ ಪ್ರತಿ ಜಿಲ್ಲೆಯಲ್ಲಿ ಸರಾಸರಿ 30ರಿಂದ 40 ಮಂದಿ ಇರುತ್ತಾರೆ. ಈ ದಳಕ್ಕೆ ಬೇರೆ ಜಿಲ್ಲೆಗಳಿಂದಲೇ ಉಪನ್ಯಾಸಕರನ್ನು ಕರೆಸಿಕೊಳ್ಳಲಾಗಿರುತ್ತದೆ. ಊಟ, ವಸತಿ, ಪ್ರಯಾಣ ವೆಚ್ಚ ಸಹಿತ ಪ್ರತಿಯೊಬ್ಬರಿಗೂ ಕನಿಷ್ಠ ₹ 12 ಸಾವಿರದಿಂದ ₹ 15 ಸಾವಿರದಷ್ಟು ಖರ್ಚಾಗಿರುತ್ತದೆ. ಕೆಲವರಿಗೆ ₹ 20 ಸಾವಿರದಷ್ಟು ಖರ್ಚಾಗಿದ್ದೂ ಇದೆ. ತಾವು ಮಾಡಿದ ಖರ್ಚಿನ ಹಣವನ್ನು ನೀಡಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಉಪನ್ಯಾಸಕರು ಪ್ರಶ್ನಿಸಿದ್ದಾರೆ.

‘ಮೌಲ್ಯಮಾಪನ ಮಾಡಿದವರಿಗೆ ಸಕಾಲದಲ್ಲಿ ಗೌರವಧನ ಪಾವತಿ ಮಾಡುವ ಸರ್ಕಾರ ನಮಗೇಕೆ ಗೌರವಧನ ನೀಡುತ್ತಿಲ್ಲ? ನಾವು ಮಾಡಿದ ತಪ್ಪಾದರೂಏನು?’ ಎಂದು ವಿಶೇಷ ಜಾಗೃತ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಲವರು ‘ಪ್ರಜಾವಾಣಿ’ಗೆ ಬಳಿ ಹೇಳಿಕೊಂಡರು.

ADVERTISEMENT

‘ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆಗೌರವಧನ ಇನ್ನೂ ಪಾವತಿಯಾಗಿಲ್ಲ. ಇನ್ನು ಎರಡೂವರೆ ತಿಂಗಳಲ್ಲಿ ಈ ಬಾರಿಯ ವಾರ್ಷಿಕ ಪರೀಕ್ಷೆ ನಡೆಯಲಿದೆ. ಅಷ್ಟರೊಳಗಾದರೂ ಗೌರವಧನ ಸಿಕ್ಕೀತೇ?’ ಎಂದು ಅವರು ಪ್ರಶ್ನಿಸಿದರು.

ವಿಶೇಷ ಜಾಗೃತದ ಏಕಾಗಿ?: ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ವಿಶೇಷ ಜಾಗೃತ ದಳ ರಚಿಸಲಾಗಿರುತ್ತದೆ. ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳು ತಾಲ್ಲೂಕಿಗೆ ಒಂದು ಅಥವಾ ಎರಡು ಇರುತ್ತದೆ.ಒಂದು ಕೇಂದ್ರಕ್ಕೆ ಒಬ್ಬರು ಪ್ರಶ್ನೆಪತ್ರಿಕೆ ಅಧೀಕ್ಷಕರು ಇರುತ್ತಾರೆ. ಸುಮಾರು 4ರಷ್ಟು ತಾಲ್ಲೂಕು ಜಾಗೃತ ದಳ ಸಿಬ್ಬಂದಿ, 5ರಿಂದ 6 ಜಿಲ್ಲಾ ಮಟ್ಟದ ಜಾಗೃತ ದಳ ಸಿಬ್ಬಂದಿ ಇರುತ್ತಾರೆ.

ಗೌರವಧನ ಪಾವತಿಗೆ ಈಗಾಗಲೇ ಅಧಿಕೃತ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಉಪನಿರ್ದೇಶಕರು ಸಿಬ್ಬಂದಿಗೆ ಶೀಘ್ರ ಇದನ್ನು ವಿತರಿಸಲಿದ್ದಾರೆ.

- ಎಂ.ಕನಗವಲ್ಲಿ, ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ

ಅಂಕಿ ಅಂಶಗಳು

₹ 576ವಿಶೇಷ ಜಾಗೃತ ದಳದ ದಿನದ ಗೌರವಧನ

19ಕಳೆದ ವರ್ಪ ಷರೀಕ್ಷೆ ನಡೆದ ದಿನಗಳು

₹ 10,944ಗೌರವಧನ ರೂಪದಲ್ಲೇ ಪಾವತಿಸಬೇಕಾದ ಮೊತ್ತ

1,000ಜಾಗೃತ ದಳದಲ್ಲಿದ್ದವರ ಅಂದಾಜು ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.