ADVERTISEMENT

ಎಸ್‌.ಎಸ್‌.ಎಲ್‌.ಸಿ ಮಕ್ಕಳಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 12:29 IST
Last Updated 21 ಏಪ್ರಿಲ್ 2020, 12:29 IST
   

ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೈಗೊಂಡಿರುವ ಮಕ್ಕಳಿಗ ತಾವೇ ನೇರವಾಗಿ ಫೋನ್ ಮಾಡಿ ಮಾತನಾಡುವ ದೈರ್ಯ ತುಂಬುವ ಕೈಂಕರ್ಯವನ್ನು ಮಂಗಳವಾರವೂ ಮುಂದುವರಿಸಿದರು.

ತಮ್ಮ ಕಚೇರಿಯಲ್ಲಿ ಮಧ್ಯಾಹ್ನ ತಾವೇ ಮೈಸೂರು ವಿಭಾಗದ ಮೈಸೂರು, ಹಾಸನ, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವಾರು ವಿದ್ಯಾರ್ಥಿಗಳಿಗೆ ಕರೆ ಮಾಡಿ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಿದ್ದೀರಿ, ಪರೀಕ್ಷೆ ಮಾಡಬೇಕೆ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಲ್ಲ ಮಕ್ಕಳು, ತಡವಾದ್ರೂ ಪರವಾಯಿಲ್ಲ ಪರೀಕ್ಷೆ ಮಾಡಲೇಬೇಕು ಎಂದರು.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದಕ್ಕೆ ಹೋಗಿದ್ದು, ಅಭ್ಯಾಸಕ್ಕೆ ಹೆಚ್ಚಿನ ಸಮಯ ದೊರೆತಿರುವುದುಅನುಕೂಲವೇ ಆಗಿದೆ. ನಾವು ಪರೀಕ್ಷೆಗೆ ತಯಾರಾಗಿದ್ದೇವೆ ಎಂದು ಮಕ್ಕಳು ಶಿಕ್ಷಣ ಸಚಿವರೇ ಖುದ್ದಾಗಿ ಫೋನ್ ಮಾಡಿದಾಗ ಖುಷಿಯಿಂದಲೇ ಉತ್ತರಿಸಿದರು. ಸಚಿವರು ಮಕ್ಕಳ ತಂದೆ ತಾಯಿಯರೊಂದಿಗೂ ಮಾತನಾಡಿ, ಮಕ್ಕಳಿಗೆ ಧೈರ್ಯ ಹೇಳಿ, ಲಾಕ್ ಡೌನ್ ಮುಗಿದ ತಕ್ಷಣವೇ ಪರೀಕ್ಷೆ ಮಾಡುತ್ತೇವೆ ಎಂದರು.

ADVERTISEMENT

ಒಂದೆರೆಡು ದೂರದರ್ಶನ ಚಾನಲ್ ನಲ್ಲಿ ಎಸ್ ಎಸ್ ಎಲ್ ಸಿ ಪಠ್ಯದ ಪುನರಾವರ್ತನಾ ತರಗತಿಗಳು ನಡೆಯಲಿದ್ದು, ಅವುಗಳನ್ನು ಮಕ್ಕಳು ನೋಡಬೇಕೆಂದು ಸಚಿವರು ತಿಳಿಸಿದರು. ಚೆನ್ನಾಗಿ ಓದಿ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರಬೇಕೆಂದರು.

ಇದಲ್ಲದೇ ಬಾಗಲಕೋಟೆಯ ಇಳಕಲ್ ಕಂದಗಲ್ನ ಇಬ್ಬರು, ಹೊನ್ನಾಳಿ ತಾಲೂಕು ಬೆನಕನಹಳ್ಳಿಯ ಮಕ್ಕಳೊಂದಿಗೂ ಸಚಿವರು ಮಾತನಾಡಿ ಧೈರ್ಯ ತುಂಬಿದರು. ಸಾರ್ ಕೊರೋನಾ ಸಾಧ್ಯವಾದಷ್ಟು ಬೇಗನೇ ಹೊರಟು ಹೋಗಲಿ ಎಂದು ನಾವೆಲ್ಲ ದಿನಂಪ್ರತಿ ಬೇಡಿಕೊಳ್ಳೋಣ ಎಂದು ವಿದ್ಯಾರ್ಥಿನಿಯೊಬ್ಬಳು ಸಚಿವರಿಗೆ ತಿಳಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.