ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಕೊರೊನಾ ಹಿಂದಿಕ್ಕಿ ಶೇ 71.80 ಸಾಧನೆ

ಜಿಲ್ಲೆಗಳಿಗೆ ಮೊದಲ ಬಾರಿ ‘ಗ್ರೇಡ್‌’ಪದ್ಧತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 19:31 IST
Last Updated 10 ಆಗಸ್ಟ್ 2020, 19:31 IST
ಐ.ಪಿ. ತನ್ಮಯಿ, ಅನುಷ್‌ ಎ.ಎಲ್., ಸನ್ನಿಧಿ ಮಹಾಬಲೇಶ್ವರ ಹೆಗಡೆ, ಎಂ.ಪಿ. ಧೀರಜ್‌ ರೆಡ್ಡಿ, ನಿಖಿಲೇಶ್‌, ಚಿರಾಯು ಕೆ.ಎಸ್.
ಐ.ಪಿ. ತನ್ಮಯಿ, ಅನುಷ್‌ ಎ.ಎಲ್., ಸನ್ನಿಧಿ ಮಹಾಬಲೇಶ್ವರ ಹೆಗಡೆ, ಎಂ.ಪಿ. ಧೀರಜ್‌ ರೆಡ್ಡಿ, ನಿಖಿಲೇಶ್‌, ಚಿರಾಯು ಕೆ.ಎಸ್.    

ಬೆಂಗಳೂರು: ಕೋವಿಡ್‌ನಿಂದಾಗಿ ಹಲವು ಗೋಜಲು–ಗೊಂದಲಗಳ ಮಧ್ಯೆಯೇ ನಡೆದಿದ್ದಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದವರ ಪೈಕಿ ಶೇ 71.80ರಷ್ಟು ವಿದ್ಯಾರ್ಥಿಗಳು ತಮ್ಮ ಬದುಕಿನ ಆರಂಭಿಕ ಹಂತದ ದೊಡ್ಡ ಸವಾಲಿನಲ್ಲಿ ಗೆದ್ದಿದ್ದಾರೆ.

ಫಲಿತಾಂಶದಲ್ಲಿಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಕಳೆದ ವರ್ಷ ಶೇ 73.70ರಷ್ಟು ಫಲಿತಾಂಶ ಬಂದಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಶೇ 1.90ರಷ್ಟು ಫಲಿತಾಂಶ ಕುಸಿತವಾಗಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು 625ಕ್ಕೆ 625 ಹಾಗೂ 11 ಮಂದಿ 624 ಅಂಕ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ 625ಕ್ಕೆ ಮೂವರು 623, ಐವರು 622, ನಾಲ್ವರು 621 ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.

ADVERTISEMENT

ಈ ಬಾರಿ 501 ಸರ್ಕಾರಿ ಶಾಲೆಗಳೂ ಸೇರಿದಂತೆ ಒಟ್ಟು 1,550 ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ. ನಾಲ್ಕು ಸರ್ಕಾರಿ ಶಾಲೆಗಳಿಗೆ ಶೂನ್ಯ ಫಲಿತಾಂಶ ಬಂದಿದೆ. ಆದರೆ, ಕಳೆದ ವರ್ಷ ಯಾವುದೇ ಸರ್ಕಾರಿ ಶಾಲೆ ಶೂನ್ಯ ಸಾಧನೆ ಮಾಡಿರಲಿಲ್ಲ.

ಪೈಪೋಟಿ ತಪ್ಪಿಸಲು ಗ್ರೇಡ್‌: ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಪ್ರಾಥಮಿಕ ಮತ್ತು ಪೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್, ‘ಜಿಲ್ಲೆಗಳ ಮಧ್ಯೆ ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಉದ್ದೇಶದಿಂದ ಈ ಬಾರಿ ಶೈಕ್ಷಣಿಕ ಜಿಲ್ಲೆಗಳಿಗೆ ರ‍್ಯಾಂಕಿಂಗ್ ಕೊಡುವ ಪದ್ಧತಿ ಕೈಬಿಟ್ಟು ‘ಗ್ರೇಡ್’ (ಶ್ರೇಣಿ) ನೀಡಲಾಗಿದೆ. ವಿದ್ಯಾರ್ಥಿಗಳು ಉತ್ತೀರ್ಣಗೊಂಡ ಪ್ರಮಾಣ ಲೆಕ್ಕಾಚಾರ ಮಾಡಿ ಅದರ ಆಧಾರದಲ್ಲಿ ಜಿಲ್ಲೆಗಳಿಗೆ ‘ಎ’, ‘ಬಿ’, ‘ಸಿ’ ಎಂದು ಗ್ರೇಡ್‌ ನೀಡಲಾಗಿದೆ’ ಎಂದು ವಿವರಿಸಿದರು.

‘ಫಲಿತಾಂಶವನ್ನು ಎಲ್ಲ ಶಾಲೆಗಳಲ್ಲಿ ಮಂಗಳವಾರ (ಆಗಸ್ಟ್‌ 11) ಪ್ರಕಟಿಸಲಾಗುವುದು. ಅಲ್ಲದೆ, ಕ್ರೋಡೀಕೃತ ಫಲಿತಾಂಶ ಪಟ್ಟಿ ಮತ್ತು ವಿದ್ಯಾರ್ಥಿಗಳ ತಾತ್ಕಾಲಿಕ ಅಂಕಪಟ್ಟಿಯನ್ನೂ ವಿತರಿಸಲಾಗುವುದು. ಶಾಲಾ ಹಂತದಲ್ಲೇ ಅಂಕಪಟ್ಟಿ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದೂ ಅವರು ತಿಳಿಸಿದರು.‌

ಮರು ಮೌಲ್ಯಮಾಪನ: ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಆ. 20 ಕೊನೆ ದಿನ. ಮರುಮೌಲ್ಯಮಾಪನಕ್ಕೆ ಆ 14ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, 24 ಕೊನೆಯ ದಿನ. ಪೂರಕ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದೂ ಸಚಿವರು ಹೇಳಿದರು.

ಮಾರ್ಚ್‌–ಏಪ್ರಿಲ್‌ನಲ್ಲಿ ನಡೆಯಬೇಕಿದ್ದ 2019–20ನೇ ಸಾಲಿನ ಪರೀಕ್ಷೆ, ಕೋವಿಡ್‌ ಕಾರಣದಿಂದ ಜೂನ್‌ 25ರಿಂದ ಜುಲೈ 4ರವರೆಗೆ ಆಯೋಜನೆಯಾಗಿತ್ತು. ಫಲಿತಾಂಶ ನೋಡಲು ಈ ಲಿಂಕ್‌ ಕ್ಲಿಕ್ಕಿಸಿ: http://kseeb.kar.nic.in ಅಥವಾ http://karresults.nic.in

ರ‍್ಯಾಂಕಿಂಗ್ ಪದ್ಧತಿ ಬಿಟ್ಟು ‘ಗ್ರೇಡ್’
ಇಡೀ ಜಿಲ್ಲೆಯಲ್ಲಿ ಒಟ್ಟು ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ (ಶೇ 40), ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ತೆಗೆದುಕೊಂಡ ಒಟ್ಟಾರೆ ಅಂಕಗಳು (ಶೇ 40) ಮತ್ತು ಪ್ರಥಮ ದರ್ಜೆ ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ (ಶೇ 20) ಆಧರಿಸಿ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳಿಗೆ ಗ್ರೇಡ್ ನೀಡಲಾಗಿದೆ.

ಶೇ 85 ಮತ್ತು ಅದಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಜಿಲ್ಲೆಗಳು ‘ಎ’ ಗ್ರೇಡ್‌, ಶೇ 60ರಿಂದ ಶೇ 85ರೊಳಗೆ ಫಲಿತಾಂಶ ಬಂದ ಜಿಲ್ಲೆಗಳು ‘ಬಿ’, ಶೇ 60ಕ್ಕಿಂತ ಕಡಿಮೆ ಬಂದ ಜಿಲ್ಲೆಗಳಿಗೆ ‘ಸಿ’ ಗ್ರೇಡ್‌ ನೀಡಲಾಗಿದೆ.

ಗ್ರೇಡ್‌ (10)– ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರಕನ್ನಡ ‘ಬಿ’ ಗ್ರೇಡ್‌ (20) – ಚಾಮರಾಜನಗರ, ಮಂಗಳೂರು, ಬಳ್ಳಾರಿ, ತುಮಕೂರು, ಶಿರಸಿ, ಬೆಂಗಳೂರು ಉತ್ತರ, ದಾವಣಗೆರೆ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕಲಬುರ್ಗಿ, ಕೊಪ್ಪಳ, ಬೀದರ್‌, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಬೆಂಗಳೂರು ದಕ್ಷಿಣ, ಚಿಕ್ಕೋಡಿ ‘ಸಿ’ ಗ್ರೇಡ್‌ (4)– ಬೆಳಗಾವಿ, ಗದಗ, ಹಾವೇರಿ, ಯಾದಗಿರಿ

‘ಪೂರಕ ಪರೀಕ್ಷೆ ಪ್ರಥಮ ಅವಕಾಶ’
‘ಕಲಿಕೆ ಇಲ್ಲದ ಸುಮಾರು 100 ದಿನ, ಅನೇಕ ಗೊಂದಲ, ಕೊರೊನಾ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗೆ ನೋಂದಾಯಿತ 8,48,203 ವಿದ್ಯಾರ್ಥಿಗಳ ಪೈಕಿ, ಹಾಜರಾತಿ ಕೊರತೆ ಕಾರಣಕ್ಕೆ 19,086 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಕೊರೊನಾ ಅಥವಾ ಇತರ ಕಾರಣಗಳಿಗೆ 18,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಈ ವಿದ್ಯಾರ್ಥಿಗಳು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆ ಬರೆದರೆ, ಅದನ್ನು ಪ್ರಥಮ ಅವಕಾಶ ಎಂದು ಪರಿಗಣಿಸಲಾಗುವುದು’ ಎಂದು ಸುರೇಶ್‌ಕುಮಾರ್‌ ತಿಳಿಸಿದರು.

***
ಎಸ್ಸೆಸ್ಸೆಲ್ಸಿ: 6 ವಿದ್ಯಾರ್ಥಿಗಳಿಗೆ ಶೇ 100ರಷ್ಟು ಅಂಕ

ರಾಜ್ಯದ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದವರು.ಕಳೆದ ಬಾರಿ ಇಬ್ಬರಷ್ಟೇ ಈ ಸಾಧನೆ ಮಾಡಿದ್ದರು.

ಐ.ಪಿ. ತನ್ಮಯಿ

ಶಾಲೆ: ಸೇಂಟ್‌ ಜೋಸೆಫ್‌ ಬಾಲಕಿಯರ ಪ್ರೌಢಶಾಲೆ, ಚಿಕ್ಕಮಗಳೂರು

ತಂದೆ–ತಾಯಿ: ಐ.ಎಸ್. ಪ್ರಸನ್ನ– ಡಿ.ಎಲ್. ಸಂಧ್ಯಾ

ಶೈಕ್ಷಣಿಕ ವರ್ಷದ ಆರಂಭದಿಂದಲೂ ಚೆನ್ನಾಗಿ ಸಿದ್ಧತೆ ಮಾಡಿದ್ದೆ. ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಮಾಡಿದಾಗ ಪರೀಕ್ಷೆ ನಡೆಯುತ್ತದೋ, ಇಲ್ಲವೋ ಎಂಬ ಭಯ ಇತ್ತು. ವೇಳಾಪಟ್ಟಿ ಪ್ರಕಟಿಸಿದಾಗ ಧೈರ್ಯ ಬಂತು.ದಿನಕ್ಕೆ 6 ಗಂಟೆ ಓದುತ್ತಿದ್ದೆ. ತರಗತಿಯಲ್ಲಿ ಪಾಠ ಗಮನವಿಟ್ಟು ಕೇಳುತ್ತಿದ್ದೆ. ಕೋಚಿಂಗ್‌ಗೆ ಹೋಗಿರಲಿಲ್ಲ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಬಿಡಿಸಿದ್ದೆ. –ತನ್ಮಯಿ.

**
ಅನುಷ್‌ ಎ.ಎಲ್.

ಶಾಲೆ: ಕುಮಾರಸ್ವಾಮಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ, ಸುಬ್ರಹ್ಮಣ್ಯ, ದಕ್ಷಿಣ ಕನ್ನಡ ಜಿಲ್ಲೆ

ತಂದೆ–ತಾಯಿ: ಎಣ್ಣೆಮಜಲು ಲೋಕೇಶ್–ಉಷಾ

ಲಾಕ್‌ಡೌನ್‌ನಿಂದ ಮತ್ತಷ್ಟು ಓದಲು ಅವಕಾಶ ಸಿಕ್ಕಿತು. ರಾಜ್ಯಕ್ಕೆ ಮೊದಲ ಸ್ಥಾನ ಎಂದು ಅಪ್ಪ ಹೇಳಿದಾಗ ಅಚ್ಚರಿ–ಖುಷಿ ಒಟ್ಟಿಗೇ ಆಯಿತು.ನಿತ್ಯ ಐದು ಗಂಟೆ ಓದುತ್ತಿದ್ದೆ. ಯಾವುದೇ ಕೋಚಿಂಗ್‌ಗೆ ಹೋಗಿಲ್ಲ.ನಾನು ಗ್ರಾಮೀಣ ಭಾಗದಲ್ಲಿ ಬೆಳೆದಿದ್ದು, ಪರಿಸರ ಮತ್ತು ವಿಜ್ಞಾನ ನನ್ನ ಇಷ್ಟದ ವಿಷಯ. ಅದಕ್ಕಾಗಿ ಐಎಫ್‌ಎಸ್ ಮಾಡಿ, ಅರಣ್ಯ–ವನ್ಯಜೀವಿ ರಕ್ಷಣೆ ಮಾಡಬೇಕು ಎಂಬ ತುಡಿತವಿದೆ. –ಅನುಷ್.

**

ಸನ್ನಿಧಿ ಹೆಗಡೆ
ಶಾಲೆ: ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ, ಶಿರಸಿ
ತಂದೆ–ತಾಯಿ: ಮಹಾಬಲೇಶ್ವರ ಹೆಗಡೆ, ವೀಣಾ ಹೆಗಡೆ

ಕೊರೊನಾ ಇದೆಯೆಂದು ಓದುವುದನ್ನು ಬಿಟ್ಟಿರಲಿಲ್ಲ. ಓದಿದ್ದನ್ನು ಮರೆಯಬಾರದೆಂದು ಶಾಲೆಯಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿ, ಉತ್ತರ ಬರೆದು ಹಾಕುವಂತೆ ತಿಳಿಸುತ್ತಿದ್ದರು. ಗೂಗಲ್ ಮೀಟ್ ಮೂಲಕ ಗಣಿತ, ವಿಜ್ಞಾನ ವಿಷಯಗಳ ಪುನರ್ ಮನನ ಮಾಡಿಸುತ್ತಿದ್ದರು. ಇವು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾದವು. ಟ್ಯೂಷನ್‌ಗೆ ಹೋಗಿಲ್ಲ. ಪ್ರಥಮ ಸ್ಥಾನ ಬರುವ ನಿರೀಕ್ಷೆಯಿತ್ತು. –ಸನ್ನಿಧಿ.

**
ಎಂ.ಪಿ.ಧೀರಜ್‌ ರೆಡ್ಡಿ
ಶಾಲೆ: ಮಾರದೇವನಹಳ್ಳಿಯ ಶ್ರೀಸತ್ಯಸಾಯಿ ಸರಸ್ವತಿ ಬಾಲಕರ ಪ್ರೌಢಶಾಲೆ,ಮಂಡ್ಯ ಜಿಲ್ಲೆ
ತಂದೆ–ತಾಯಿ: ಎಂ. ಪ್ರಭಾಕರ್‌ ರೆಡ್ಡಿ– ಮಂಜುಳಾ

ನನ್ನ ಮಾತೃಭಾಷೆ ತೆಲುಗು. ನಾವು ಆಂಧ್ರಪ್ರದೇಶ ಗಡಿಯ ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಗ್ರಾಮದವರು. ಕನ್ನಡದಲ್ಲಿ ಭಾಷಾ ವಿಷಯದಲ್ಲಿ ಒಂದೆರಡು ಅಂಕಗಳು ಕಡಿಮೆ ಬರಬಹುದು ಎಂದು ಭಾವಿಸಿದ್ದೆ. ಆದರೆ, ಪೂರ್ಣ ಅಂಕ ಬಂದಿರುವುದು ಸಂತಸ ಉಂಟು ಮಾಡಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸಾಕಷ್ಟು ಸಮಯ ಸಿಕ್ಕ ಕಾರಣ ಚೆನ್ನಾಗಿ ಓದಿಕೊಳ್ಳಲು ಸಾಧ್ಯವಾಯಿತು –ಧೀರಜ್.

**
ನಿಖಿಲೇಶ್‌ ಮಾರಳಿ
ಶಾಲೆ:
ಪೂರ್ಣಪ್ರಜ್ಞ ಎಜುಕೇಶನ್‌ ಸೆಂಟರ್, ಸದಾಶಿವನಗರ, ಬೆಂಗಳೂರು
ತಂದೆ–ತಾಯಿ: ನಾಗೇಶ ಮಾರಳಿ, ಹರಿಣಾಕ್ಷಿ ನಾಗೇಶ

ಸೋಂಕಿನ ಬಗ್ಗೆ ಮೊದಲು ಆತಂಕವಿತ್ತು. ಮುಂಜಾಗ್ರತಾ ಕ್ರಮಗಳನ್ನು ನೋಡಿ ಧೈರ್ಯ ಬಂದಿತು. ಮೊದಲಿನಿಂದಲೂ ದಿನಕ್ಕೆ ಎರಡು–ಮೂರು ತಾಸು ಓದುತ್ತಿದ್ದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಪುನರಾವರ್ತನೆ ಮಾಡಲು ಸಮಯ ಸಿಕ್ಕಿತು. ವೈದ್ಯಳಾಗಿರುವ ಅಕ್ಕನಿಂದ ಸಲಹೆ ಪಡೆಯುತ್ತಿದ್ದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆಮಾಡಿಕೊಳ್ಳುತ್ತೇನೆ– ನಿಖಿಲೇಶ್.

**
ಕೆ.ಎಸ್. ಚಿರಾಯು
ಶಾಲೆ:
ಶೋನ್‌ಸ್ಟ್ಯಾಟ್‌ ಸೇಂಟ್‌ ಮೇರಿಸ್‌ ಪ್ರೌಢಶಾಲೆ, ನಾಗಸಂದ್ರ, ಬೆಂಗಳೂರು
ತಂದೆ–ತಾಯಿ: ಶಂಕರನಾರಾಯಣ, ಕವಿತಾ

ಶಾಲೆ ಪ್ರಾರಂಭವಾದಾಗಿನಿಂದ ನಿತ್ಯ ಎರಡು ತಾಸು ಓದುತ್ತಿದ್ದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಪರೀಕ್ಷೆ ಕುರಿತು ಉಂಟಾದ ಗೊಂದಲದಿಂದ ಸ್ವಲ್ಪ ಒತ್ತಡಕ್ಕೆ ಒಳಗಾಗಿದ್ದೆ. ಆದರೆ, ಮೂರು ತಿಂಗಳಲ್ಲಿ ಮತ್ತಷ್ಟು ಓದಲು ಸಮಯ ಸಿಕ್ಕಿತು. ವಿರೋಧದ ನಡುವೆಯೂ ಪರೀಕ್ಷೆ ನಡೆಸಿದ ಸಚಿವ ಸುರೇಶ್‌ಕುಮಾರ್‌ ಸರ್‌ಗೆ ಥ್ಯಾಂಕ್ಸ್‌ ಹೇಳುತ್ತೇನೆ. ಪಿಯುಸಿಯಲ್ಲಿ ವಿಜ್ಞಾನ (ಪಿಸಿಎಂಬಿ) ವಿಷಯ ಆಯ್ಕೆಮಾಡಿಕೊಳ್ಳುತ್ತೇನೆ– ಚಿರಾಯು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.