ಬೆಂಗಳೂರು: ‘ನವಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಧ್ಯೇಯದೊಂದಿಗೆ ಇದೇ 14ರಿಂದ 20ರವರೆಗೆ ‘ಅಖಿಲ ಭಾರತ ಸಹಕಾರ ಸಪ್ತಾಹ’ ನಡೆಯಲಿದೆ’ ಎಂದು ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಅಧ್ಯಕ್ಷ ಎನ್.ನಾಗಣ್ಣ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜವಾಹರಲಾಲ್ ನೆಹರೂ ಸ್ಮರಣಾರ್ಥ ಪ್ರತಿವರ್ಷ ನಡೆಯುವ ಸಪ್ತಾಹ, ಅವರ ಜನ್ಮದಿನವಾದ ನವೆಂಬರ್ 14ರಂದು ಬೆಳಿಗ್ಗೆ 10.30ಕ್ಕೆ ತಮಕೂರಿನ ಕಿರಿಯ ಕಾಲೇಜು ಮೈದಾನದಲ್ಲಿ ಆರಂಭವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಪ್ತಾಹವನ್ನು ಉದ್ಘಾಟಿಸಿ, ಆರು ಮಂದಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಚಿವರಾದ ವಿ. ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ’ ಕುರಿತು ಉಪನ್ಯಾಸ ನಡೆಯಲಿದೆ.
ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಿಚಾರಗೋಷ್ಠಿ, ಸಭೆ, ಸಮ್ಮೇಳನಗಳು ನಡೆಯಲಿವೆ. ಈ ಬಾರಿ ಏಳು ಜಿಲ್ಲೆಗಳಲ್ಲಿ ಸಪ್ತಾಹ ನಡೆಯಲಿದೆ. ತುಮಕೂರು (ನ.14), ಕೊಪ್ಪಳ (15), ಯಾದಗಿರಿ (16), ಧಾರವಾಡ (17), ಉಡುಪಿ (18), ಚಿತ್ರದುರ್ಗ (19) ಹಾಗೂ ಮೈಸೂರಿನಲ್ಲಿ 20ರಂದು ನಡೆಯಲಿದೆ’ ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್, ನಿರ್ದೇಶಕರಾದ ಆರ್.ಕೆ.ಪಾಟೀಲ, ಎಚ್.ಎಸ್.ಪೂರ್ಣಿಮಾ, ಎಚ್.ವಿ.ನಾಗರಾಜ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.