ಬೆಳಗಾವಿ: ‘ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಐದು ವರ್ಷಗಳ ಕಾಲ ಜನಪರವಾಗಿ ಕೆಲಸ ಮಾಡಲಿದೆ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರತಿಪಕ್ಷದವರು ನಡೆಸುತ್ತಿರುವ ಸಂಚನ್ನು ನಾವು ತಡೆಯುತ್ತೇವೆ. ನಮ್ಮ ಯಾವ ಶಾಸಕರೂ ಎಲ್ಲಿಯೂ ಹೋಗುವುದಿಲ್ಲ. ಹೋಗುವಂತೆ ನೀವು (ಮಾಧ್ಯಮದವರು) ಮಾಡಬೇಡಿ’ ಎಂದು ಹೇಳಿದರು.
‘ಆನಂದ್ ಸಿಂಗ್ ಒಬ್ಬರಷ್ಟೇ ರಾಜೀನಾಮೆ ನೀಡಿದ್ದಾರೆ. ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಫ್ಯಾಕ್ಸ್ ಮೂಲಕ ರಾಜೀನಾಮೆ ಸಲ್ಲಿಸಿರುವುದು ಸಿಂಧುವಾಗುವುದಿಲ್ಲ. ಹೀಗಾಗಿ ಅವರು ರಾಜೀನಾಮೆ ಕೊಟ್ಟಂತೆ ಆಗುವುದಿಲ್ಲ. ಅವರು ಬ್ಲಾಕ್ಮೇಲ್ ಮಾಡುತ್ತಿದ್ದಾರೋ, ಎದುರಿಸುತ್ತಿದ್ದಾರೋ, ಏನೋ ಅವರನ್ನೇ ಕೇಳಿರಿ’ ಎಂದು ಪತ್ರಕರ್ತರನ್ನು ಕೋರಿದರು.
‘ನಮ್ಮ ಶಾಸಕರಾರೂ ರಾಜೀನಾಮೆ ಕೊಡುವುದಿಲ್ಲ. ಕೊಟ್ಟರೆ ಬಿಜೆಪಿಯವರೇ ಕೊಡವಹುದೇನೋ’ ಎಂದು ಮಾರ್ಮಿಕವಾಗಿ ಹೇಳಿದರು.
‘ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಮಹತ್ವದ ಕೊಡುಗೆ ಸಿಕ್ಕಿಲ್ಲ. ಇದು ರಾಜ್ಯದಲ್ಲಿರುವ ಮೂವರು ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರ ಸಂಪೂರ್ಣ ವೈಫಲ್ಯವಾಗಿದೆ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.