ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರು: ಮೆಟ್ರೊ ರೈಲು ಯೋಜನೆಗೆ ಕೇಂದ್ರದ ಸಹಭಾಗಿತ್ವ ಇದ್ದರೂ, ದರ ಏರಿಕೆ ಪ್ರಸ್ತಾವ ಸಲ್ಲಿಸಿದ್ದೇ ಕರ್ನಾಟಕ. ಈ ಗೊಂದಲಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮೆಟ್ರೊ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ ಎನ್ನುವ ಆರೋಪ ಸರಿಯಲ್ಲ. ಬಿಎಂಆರ್ಸಿಎಲ್ನಲ್ಲಿ ಕೇಂದ್ರದ ಪಾಲು ಹೊಂದಿದ್ದರೂ ನಿರ್ವಹಣೆ, ಕಾರ್ಯಾಚರಣೆ ರಾಜ್ಯದ್ದೇ ಆಗಿರುತ್ತದೆ. ಮೆಟ್ರೊ ಪ್ರಯಾಣ ದರ ಏರಿಕೆ ಸಮಿತಿ ಇರುವುದೂ ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಅಲ್ಲ ಎಂದರು.
‘ಮೆಟ್ರೊ ಕರ್ನಾಟಕದಲ್ಲಷ್ಟೇ ಅಲ್ಲ, ದೆಹಲಿ, ಮುಂಬೈ, ಹೈದರಾಬಾದ್ನಲ್ಲೂ ಇದೆ. ಅಲ್ಲಿ ಇಷ್ಟೊಂದು ದರ ಏಕೆ ಇಲ್ಲ? ದರ ಏರಿಕೆ ಪ್ರಸ್ತಾವ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿಲ್ಲ. ಅದು ಕೇಂದ್ರದ ನೀತಿಯೂ ಅಲ್ಲ. ವಾಸ್ತವ ಗೊತ್ತಿದ್ದರೂ ಇಂತಹ ಆರೋಪ ಮಾಡುವವರಿಗೆ ಮುಖ್ಯಮಂತ್ರಿಯೇ ಉತ್ತರಿಸಬೇಕು’ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ವ್ಯವಸ್ಥೆ ಇನ್ನಷ್ಟು ಸುಧಾರಣೆಯಾಗಬೇಕು. ವಿಸ್ತರಣಾ ಕಾರ್ಯ ವೇಗ ಪಡೆಯಬೇಕು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕನಿಷ್ಠ 400 ಕಿ.ಮೀ ಮೆಟ್ರೊ ಜಾಲ ವಿಸ್ತಾರವಾಗಬೇಕು ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಎರಡು ತಿಂಗಳು ಹಿಂದೆಯೇ ರಾಜ್ಯ ಸರ್ಕಾರ ಮೆಟ್ರೊ ಪ್ರಯಾಣ ದರವನ್ನು ಶೇ 105ರಷ್ಟು ಹೆಚ್ಚಳ ಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.