ADVERTISEMENT

ಧೈರ್ಯಶಾಲಿ ಧರ್ಮೇಗೌಡರು ಆತ್ಮಹತ್ಯೆಗೆ ಮುಂದಾಗಿದ್ದು ನಂಬಲಾಗುತ್ತಿಲ್ಲ: ದತ್ತ

ಏಜೆನ್ಸೀಸ್
Published 29 ಡಿಸೆಂಬರ್ 2020, 5:55 IST
Last Updated 29 ಡಿಸೆಂಬರ್ 2020, 5:55 IST
ವೈ.ಎಸ್.ವಿ. ದತ್ತ
ವೈ.ಎಸ್.ವಿ. ದತ್ತ   

ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (64) ಅವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಗುಣಸಾಗರ ಬಳಿಯ ರೈಲು ಹಳಿಯಲ್ಲಿ ರಕ್ತ ಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಧರ್ಮೇಗೌಡರ ಅಕಾಲಿಕ ನಿಧನ ಸುದ್ದಿಯಿಂದ ಆಘಾತ ವ್ಯಕ್ತಪಡಿಸಿರುವ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ, ಅವರು ಆತ್ಮಹತ್ಯೆಗೆ ಮುಂದಾಗಿದ್ದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಧರ್ಮೇಗೌಡರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ವಿಶೇಷವಾದ ಆತ್ಮೀಯತೆ ಇತ್ತು. ಧರ್ಮೇಗೌಡರ ತಂದೆ ಮತ್ತು ನಮ್ಮ ತಂದೆ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. ಆ ಸಮಯದಿಂದಲೇ ಧರ್ಮೇಗೌಡರು ರಾಜಕೀಯವಾಗಿ ಬೆಳೆಯೋದನ್ನ ನಾನು ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

ಧರ್ಮೇಗೌಡರದ್ದು ಯಾವುದಕ್ಕೂ ಅಂಜದೇ ಇರುವ ವ್ಯಕ್ತಿತ್ವ ಅಷ್ಟೇ ಧೈರ್ಯಶಾಲಿ. ಮಾತು ಒರಟಾದರೂ ಕೂಡ ಒಳ್ಳೆಯ ಹೃದಯವಂತ. ರಾಜಕೀಯದಲ್ಲಾಗಲಿ ಅಥವಾ ಹೋರಾಟಗಳಲ್ಲಾಗಲಿ ಧೈರ್ಯ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದ ನನ್ನ ಆತ್ಮೀಯ ಗೆಳೆಯ. ಧರ್ಮೇಗೌಡ್ರು ಆತ್ಮಹತ್ಯೆಗೆ ಮುಂದಾಗಿದ್ದು ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಉಪಸಭಾಪತಿ ಗಲಭೆಗೆ ಕೆಲವೇ ದಿನಗಳ ಹಿಂದೆ ಕಡೂರು ಕ್ಷೇತ್ರದ ಹಾಲಿನ ಡೈರಿಗಳ ಸಮಸ್ಯೆಗಳ ಬಗ್ಗೆ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದೆ.‌ ಈಗ ಧರ್ಮೇಗೌಡ್ರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಮತ್ತು ಆ ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಸಖರಾಯಪಟ್ಟಣದ ಅವರ ತೋಟದ ಮನೆಗೆ ಪ್ರಯಾಣ ಬೆಳೆಸುತ್ತಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಧರ್ಮೇಗೌಡರ ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.