ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತರಾದ ಮುಖ್ಯಶಿಕ್ಷಕ ಬಿ.ಕೆ. ಫಕ್ರುದ್ದೀನ್ ಅವರಿಗೆ ಹಳೆ ವಿದ್ಯಾರ್ಥಿಗಳು ಕಾರು ಉಡುಗೊರೆ ಕೊಟ್ಟು ವಿನೂತನವಾಗಿ ಬೀಳ್ಕೊಡುಗೆ ನೀಡಿದರು.
ಈ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಫಕ್ರುದ್ದೀನ್, ವಿದ್ಯಾರ್ಥಿಗಳಿಗೆ ನೆಚ್ಚಿನ ಶಿಕ್ಷಕರಾಗಿದ್ದರು. ಈಚೆಗಷ್ಟೇ ಸೇವೆಯಿಂದ ನಿವೃತ್ತರಾಗಿದ್ದರು. ಈಚೆಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಾಗರಿಕರು ಒಟ್ಟು ಸೇರಿ ₹4.5 ಲಕ್ಷ ಮೌಲ್ಯದ ಹೊಸ ಮಾರುತಿ ಆಲ್ಟೊ ಕಾರು ಕೊಡುಗೆ ನೀಡಿ ಗೌರವಿಸಿದರು.
ಶಾಲಾ ಸಂಚಾಲಕ ಸೈಫುದ್ದೀನ್ ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಕ್ಕರಂಗಡಿ ಜುಮಾ ಮಸೀದಿ ಖತೀಬ ಆರಿಫ್ ಬಾಖವಿ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಬಿ.ಎಂ.ತುಂಬೆ ಅಭಿನಂದನಾ ಭಾಷಣ ಮಾಡಿದರು. ಇದೇ ವೇಳೆ ‘ನೆನಪಿನಂಗಳದ 40 ವರ್ಷ’ ಪುಸ್ತಕ ಬಿಡುಗಡೆ ಮತ್ತು ‘ನಮ್ಮ ಮಾಣಿಕ್ಯ’ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮುಖ್ಯಶಿಕ್ಷಕ ಹಮೀದ್ ಕೆ. ಮಾಣಿ ಪ್ರಾಸ್ತಾವಿಕ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.