ADVERTISEMENT

ನಿಲ್ಲಿಸದ ಬಸ್‌; ಚಲಿಸುವಾಗಲೇ ಇಳಿಯಲು ಹೋಗಿ ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 18:33 IST
Last Updated 13 ಏಪ್ರಿಲ್ 2023, 18:33 IST
   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಸಾರಿಗೆ ಸಂಸ್ಥೆ ಬಸ್‌ ನಿಲುಗಡೆ ಮಾಡಲಿಲ್ಲ. ಹೀಗಾಗಿ ಚಲಿಸುತ್ತಿದ್ದಾಗಲೇ ಅದರಿಂದ ಇಳಿಯಲು ಪ್ರಯತ್ನಿಸಿ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ಬುಧವಾರ ಮೃತಪಟ್ಟಿದ್ದಾರೆ.

ಹೊಳಲು ಗ್ರಾಮದ ಎಲ್.ಶ್ವೇತಾ ಶಾಂತಪ್ಪನವರ (19) ಮೃತ ವಿದ್ಯಾರ್ಥಿನಿ. ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್‌ ಆ್ಯಂಡ್ ಕಮ್ಯುನಿಕೇಶನ್ಸ್‌ ವಿಭಾಗದ ಮೊದಲ ಸೆಮಿಸ್ಟರ್ ನಲ್ಲಿ ಓದುತಿದ್ದ ಶ್ವೇತಾ, ಪ್ರತಿದಿನ ಪಟ್ಟಣದ ಹಾಸ್ಟೆಲ್‌ನಿಂದ ಕಾಲೇಜಿಗೆ ಬಸ್‌ನಲ್ಲಿ ಹೋಗಿ ಬರುತಿದ್ದರು.

ಪಟ್ಟಣ ನಿಲ್ದಾಣದಲ್ಲಿ ಹಾವೇರಿಗೆ ಹೊರಟಿದ್ದ ಬಸ್ ಹತ್ತಿದ್ದ ವಿದ್ಯಾರ್ಥಿನಿ ಕಾಲೇಜು ಬಳಿ ನಿಲುಗಡೆಗೆ ಕೇಳಿದ್ದಾರೆ. ‘ಇಲ್ಲಿ ಬಸ್ ನಿಲ್ಲುವುದಿಲ್ಲ’ ಎಂದು ನಿರ್ವಾಹಕಿ ಹೇಳಿದ್ದಾರೆ. ಕಾಲೇಜು ಮುಂಭಾಗದಲ್ಲಿ ಸ್ಪೀಡ್‌ ಬ್ರೇಕರ್‌ ಸಮೀಪ ಬಸ್ ನಿಧಾನವಾಗಿ ಚಲಿಸುವಾಗಲೇ ವಿದ್ಯಾರ್ಥಿನಿ ಇಳಿಯುವ ಪ್ರಯತ್ನ ಮಾಡಿದ್ದಾರೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ.

ADVERTISEMENT

ವಿದ್ಯಾರ್ಥಿನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ. ಬಸ್ ಚಾಲಕ, ನಿರ್ವಾಹಕರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ:

‘ಬಸ್ ನಿಲುಗಡೆಗೆ ಮನವಿ ಮಾಡಿದರೂ ಚಾಲಕ, ನಿರ್ವಾಹಕರು ಸ್ಪಂದಿಸದೇ ಇದ್ದುದರಿಂದ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡ ಚಾಲಕ, ನಿರ್ವಾಹಕರ ಮೇಲೆ ಕ್ರಮ ಜರುಗಿಸಬೇಕು’ ಎಂದು ವಿದ್ಯಾರ್ಥಿಗಳು ಗುರುವಾರ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.