ಗದಗ: ‘ಜಾತಿ ಗೊತ್ತಿಲ್ಲದ ಅನಾಥ ಮಕ್ಕಳ ಶೈಕ್ಷಣಿಕ ಮತ್ತು ಉದ್ಯೋಗದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ಕಾಳಜಿ ವಹಿಸಿದ್ದು, ಎಲ್ಲರಂತೆ ಅವರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ವರದಿ ತಯಾರಿಸಿದೆ. ಇನ್ನು 15 ದಿನಗಳಲ್ಲಿ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅನಾಥ ಮಕ್ಕಳಿಗೆ ಈವರೆಗೆ ಯಾವ ಮೀಸಲಾತಿಯೂ ಇಲ್ಲ. ಅವರನ್ನು ಯಾವ ಪ್ರವರ್ಗಕ್ಕೂ ಸೇರಿಸಿಲ್ಲ. ಹಾಗಾಗಿ, ಅನಾಥ ಮಕ್ಕಳ ಬಗ್ಗೆ ಆಯೋಗ ವಿಶೇಷ ಆಸ್ಥೆ ವಹಿಸಿದೆ. ಈ ಸಂಬಂಧ ರಾಜ್ಯದಲ್ಲಿರುವ ಅನಾಥ ಮಕ್ಕಳ ಸಂಖ್ಯೆ ಹಾಗೂ ಮಾಹಿತಿಯನ್ನು ಸಂಗ್ರಹಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಕೋವಿಡ್–19ನಿಂದ ತಂದೆ, ತಾಯಿಗಳನ್ನು ಕಳೆದುಕೊಂಡ ಮಕ್ಕಳು ಕೂಡ ಬಾಲಮಂದಿರದಲ್ಲಿ ಇದ್ದಾರೆ. ಆದರೆ, ಅವರಿಗೆ ತಮ್ಮ ಜಾತಿ ಯಾವುದೆಂಬುದು ತಿಳಿದಿದೆ. ಬಿಟ್ಟು ಹೋದ ಮಕ್ಕಳ ಜಾತಿ ಯಾವುದೆಂಬುದು ಯಾರಿಗೂ ಗೊತ್ತಿರುವುದಿಲ್ಲ. ಅಂತಹ ಮಕ್ಕಳಲ್ಲಿ ಅನೇಕರು ಬಾಲಮಂದಿರದಲ್ಲೇ ಶಿಕ್ಷಣ ಪಡೆದು 18 ವರ್ಷಗಳನ್ನು ಪೂರೈಸಿದ ನಂತರ ಮುಂದೇನು? ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿ, ಅವರಿಗೂ ಒಂದು ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ವರದಿ ತಯಾರಿಸಲಾಗಿದ್ದು, ಅದು ಭಾಗಶಃ ಮುಗಿಯುವ ಹಂತಕ್ಕೆ ಬಂದಿದೆ’ ಎಂದು ತಿಳಿಸಿದರು.
‘ಅನಾಥ ಮಕ್ಕಳಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಅವಕಾಶ ಕಲ್ಪಿಸಿದ್ದಾರೆ ಎಂಬುದನ್ನು ಅಧ್ಯಯನ ಮಾಡಲು ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೋಗಿ ಬಂದಿದ್ದೇವೆ. ಕೆಲವು ರಾಜ್ಯಗಳ ವರದಿಯನ್ನು ಅಧ್ಯಯನ ಮಾಡಿದ್ದೇವೆ. ಅನಾಥ ಮಕ್ಕಳಿಗೆ ಇಂತಹ ಪ್ರವರ್ಗದಲ್ಲಿ ಶೇಕಡ ಇಂತಿಷ್ಟೇ ಮೀಸಲಾತಿ ಕೊಡಬೇಕು ಎಂದು ನಿರ್ದಿಷ್ಟವಾಗಿ ವರದಿಯಲ್ಲಿ ಬರೆಯಲಾಗುವುದು. ಈ ಮೂಲಕ ಅವರಿಗೆ ನ್ಯಾಯ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.