ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡುವುದು ಸೂಕ್ತ ಎಂದು ಡಾ.ಎಂ.ಕೆ.ಸುದರ್ಶನ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.
ಈ ವರದಿಯಲ್ಲಿರುವ ಸಲಹೆಯನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಮತ್ತು ಚುನಾವಣಾ ಆಯೋಗದ ಮನವೊಲಿಸಿ ಚುನಾವಣೆಯನ್ನು ಮುಂದೂಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈಗ ಕೋವಿಡ್ ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ ಜನ ಮತ್ತೆ ಒಟ್ಟಿಗೆ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಅಪಾಯಕಾರಿ. ಕೆಲವು ತಿಂಗಳುಗಳ ಮಟ್ಟಿಗೆ ಮುಂದೂಡುವುದು ಸೂಕ್ತ ಎಂಬ ಸಲಹೆಯನ್ನೂ ನೀಡಿದೆ .
‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮನೆ ಮನೆಗೆ ಹೋಗಿ ಮತವನ್ನು ಯಾಚಿಸುತ್ತಾರೆ. ಹೀಗೆ ಹೋಗುವಾಗ ಗುಂಪು ಗುಂಪಾಗಿಯೇ ಹೋಗುತ್ತಾರೆ. ಅಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವಂತಹ ಸುರಕ್ಷತಾ ಕ್ರಮ ಅನುಸರಿಸುವ ಸಾಧ್ಯತೆ ತೀರಾ ಕಡಿಮೆ. ಇದರಿಂದ ಕೊರೊನಾ ವೈರಾಣು ಮನೆ ಮನೆಗೆ ತಲುಪಿದಂತಾಗುತ್ತದೆ’ ಎಂಬ ಆತಂಕವನ್ನು ಸಮಿತಿ ವ್ಯಕ್ತಪಡಿಸಿದೆ. ಒಟ್ಟು 6,021 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯುವುದರಿಂದ ಲಕ್ಷಾಂತರ ಜನ ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.