ಬಾಗಲಕೋಟೆ: ಹಳೇಬಾಗಲಕೋಟೆಯ ರೈಲ್ವೆ ಗೇಟ್ ಬಳಿ ಅಪ್ಪನ ಮುಂದೆಯೇ ಮಗ ರೈಲಿಗೆ ತಲೆ ಕೊಟ್ಟು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಗುಳಬಾಳ ತಾಂಡಾದ ನಿವಾಸಿ ಪರಶುರಾಮ ರೂಪಲಪ್ಪ ಲಮಾಣಿ (28) ಆತ್ಮಹತ್ಯೆ ಮಾಡಿಕೊಂಡವರು. ಅವಿವಾಹಿತರಾಗಿದ್ದ ಪರಶುರಾಮ ಮೈಸೂರಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಕಂಪನಿಯಲ್ಲಿ (ಚೆಸ್ಕಾಂ) ಲೈನ್ಮನ್ ಆಗಿ ಕೆಲಸ ಮಾಡುತ್ತಿದ್ದರು. ಸಂಬಂಧಿಯೊಬ್ಬರ ಮದುವೆ ಕಾರಣ ರಜೆ ಹಾಕಿ ಊರಿಗೆ ಬಂದಿದ್ದರು ಎನ್ನಲಾಗಿದೆ.
ಅಪ್ಪ ರೂಪಲಪ್ಪ ಅವರೊಂದಿಗೆ ಬಾಗಲಕೋಟೆಗೆ ಮದುವೆಗೆ ಹೊರಟು ಬಂದಿದ್ದ ಪರಶುರಾಮ ತಾವೇ ಬೈಕ್ ಚಲಾಯಿಸುತ್ತಿದ್ದರು. ರೈಲ್ವೆ ಗೇಟ್ ಹಾಕಿದ್ದ ಕಾರಣ ವಾಹನಗಳ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು. ರೈಲು ಬರುವುದು ಕಾಣುತ್ತಲೇ ಬೈಕ್ನಹ್ಯಾಂಡಲ್ ಅಪ್ಪನ ಕೈಗೆ ಕೊಟ್ಟವರೇ ಓಡಿ ಹೋಗಿ ಹಳಿಗೆ ತಲೆ ಇಟ್ಟು ಮಲಗಿದ್ದಾರೆ ಎಂದು ತಿಳಿದುಬಂದಿದೆ.
ದಿಢೀರನೆ ಕಣ್ಣೆದುರೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಅಪ್ಪನಿಗೆ ಶಾಕ್ ಆಗಿದ್ದು, ಸ್ಥಳೀಯರು ಉಪಚರಿಸಿದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪರಶುರಾಮ ಬ್ಲ್ಯೂವೇಲ್ ಗೇಮ್ ಆಡುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ ರೂಪಲಪ್ಪ ಅದನ್ನು ನಿರಾಕರಿಸಿದರು. ರೈಲ್ವೆಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.