ADVERTISEMENT

ಜೆಡಿಎಸ್‌ ನಾಯಕರ ವಿರುದ್ಧ ಫೇಸ್‌ಬುಕ್‌ನಲ್ಲಿ ಸುಮಲತಾ ಪರೋಕ್ಷವಾಗಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 6:45 IST
Last Updated 15 ಮಾರ್ಚ್ 2019, 6:45 IST
 ಸುಮಲತಾ
ಸುಮಲತಾ   

ಬೆಂಗಳೂರು:ಜೆಡಿಎಸ್‌ ನಾಯಕರ ವಿರುದ್ಧ ಫೇಸ್‌ಬುಕ್‌ನಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸುಮಲತಾ ಅಂಬರೀಷ್ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಕಿಲ್ಲ. ನನ್ನದು ಅಂಬರೀಷ್ ಪಾಲಿಸುತ್ತಿದ್ದ ಪ್ರಾಮಾಣಿಕ ರಾಜಕೀಯ. ಅದು‌ ಮಂಡ್ಯದ ಜನರು ಪಾಲಿಸುವ ಪ್ರಾಮಾಣಿಕ ರಾಜಕೀಯ ನನ್ನದು ಎಂದು ಬರೆದುಕೊಂಡಿದ್ದಾರೆ.

‘ಅಂಬರೀಷ್‌ರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮಂಡ್ಯದ ಪ್ರತಿಯೊಬ್ಬರು ಅಂಬರೀಷ್‌ ಬಂಧುಗಳು...

ADVERTISEMENT

ಯಾಕೆಂದರೆ, ಅಂಬರೀಷ್‌ರಲ್ಲಿ ಇರುವ ಗುಣವೇ ಮಂಡ್ಯದ ಜನರಲ್ಲಿ ಇದೆ. ಮಂಡ್ಯದ ಮಣ್ಣಿನ ಗುಣದಲ್ಲಿ ಕಪಟವೇ ಇಲ್ಲ, ಸುಳ್ಳುಗಳಿಲ್ಲ, ಸಮಯ ಬಂದಾಗ ಸಮಯಕ್ಕೆ ತಕ್ಕ ಹಾಗೆ ಮಾತನಾಡುವ ಜಾಯಮಾನ ಮಂಡ್ಯದ ಮಣ್ಣಿನಲ್ಲಿ ಇಲ್ಲ.

ಮಂಡ್ಯದ ಮಣ್ಣು ಬರಿ ಮುಗ್ಧತೆಯಿಂದ ಕೂಡಿಲ್ಲ ಅದು ಪ್ರಾಮಾಣಿಕತೆಯಿಂದಲೂ ಕೂಡಿದೆ. ಆ ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಕಾಗಿಲ್ಲ.

ನನ್ನದು ಪ್ರಾಮಾಣಿಕವಾದ ಅಂಬರೀಷ್‌ ಪಾಲಿಸುತ್ತಿದ್ದ ರಾಜಕೀಯ. ಮಂಡ್ಯದ ಜನರ ರಾಜಕೀಯ’ ಎಂದು ಸುಮಲತಾ ಅಂಬರೀಷ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ನನ್ನ ಜನರಿಗಾಗಿ ನನ್ನ ಹೆಜ್ಜೆ ಎಂಬ ಮತ್ತೊಂದು ಪೋಸ್ಟ್‌ ಹಾಕಿರುವ ಸುಮಲತಾ ಅವರು, ‘ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು. ರೈತರ ಕಷ್ಟಗಳನ್ನು ಪ್ರಾಮಾಣಿಕವಾಗಿ ಅರ್ಥ ಮಾಡಿಕೊಳ್ಳುವ, ಆ ಕಷ್ಟಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನ ಆಗಬೇಕಾಗಿದೆ. ಬರೀ ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುತ್ತಾ ಹೋಗುವುದು ಅದು ರೈತರಿಗೆ ಮಾಡುವ ಅನ್ಯಾಯ. ರೈತರಿಗೆ ಭರವಸೆ ಕೊಡುವ ರಾಜಕೀಯ ಮಾಡದೆ ಅವರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವು ರಾಜಕೀಯ ಮಾಡೋಣ’ ಎಂದು ರೈತರ ವಿಷಯವನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.