ADVERTISEMENT

ಕೆಪಿಟಿಸಿಎಲ್‌ ನೇಮಕಾತಿಯಲ್ಲಿ ಅಕ್ರಮ ಆರೋಪಕ್ಕೆ ದಾಖಲೆ ಒದಗಿಸಿ: ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 19:56 IST
Last Updated 27 ಆಗಸ್ಟ್ 2022, 19:56 IST
ವಿ. ಸುನಿಲ್ ಕುಮಾರ್
ವಿ. ಸುನಿಲ್ ಕುಮಾರ್   

ಬೆಂಗಳೂರು: ಕೆಪಿಟಿಸಿಎಲ್‌ ಕಿರಿಯ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಿದ್ದರಾಮಯ್ಯ ದಾಖಲೆ ಒದಗಿಸಲಿ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್‌ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಅವರ ಆರೋಪಕ್ಕೆ ಪತ್ರಿಕಾ ಹೇಳಿಕೆ ಮೂಲಕ ಶನಿವಾರ ಪ್ರತಿಕ್ರಿಯಿಸಿರುವ ಅವರು, ‘ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಯಲ್ಲಿ ಯಾವ ಅಕ್ರಮವೂ ನಡೆದಿಲ್ಲ. ಸುಳ್ಳನ್ನೇ ಸತ್ಯವನ್ನಾಗಿಸುವ ವಿಫಲ ಯತ್ನವನ್ನು ಮಾಡಬೇಡಿ. ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ವ್ಯರ್ಥ ಸಾಹಸ ಮಾಡಬೇಡಿ’ ಎಂದಿದ್ದಾರೆ.

ತಾವು ಇಂಧನ ಸಚಿವರಾದ ಬಳಿಕ ಕೆಪಿಟಿಸಿಎಲ್‌ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 1,800 ಪವರ್‌ ಮ್ಯಾನ್‌ ಹಾಗೂ ಕಿರಿಯ ಸ್ಟೇಷನ್‌ ಪರಿಚಾರಕರಿಗೆ ಯಾವ ಕಪ್ಪು ಚುಕ್ಕೆಯೂ ಇಲ್ಲದಂತೆ ನೇಮಕಾತಿ ಆದೇಶ ನೀಡಲಾಗಿದೆ. ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪರೀಕ್ಷೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆದಿದೆ. ತಾವಾಗಲೀ, ತಮ್ಮ ಕಚೇರಿಯ ಸಿಬ್ಬಂದಿಯಾಗಲಿ ಯಾವುದೇ ಅವ್ಯವಹಾರವನ್ನೂ ನಡೆಸಿಲ್ಲ. ಈ ವಿಚಾರದಲ್ಲಿ ದಾಖಲೆ ಒದಗಿಸಿದರೆ ತನಿಖೆ ಎದುರಿಸಲು ಸಿದ್ಧ ಎಂದು
ಹೇಳಿದ್ದಾರೆ.

ADVERTISEMENT

‘ನೀವು ಮುಖ್ಯಮಂತ್ರಿ ಆಗಿದ್ದಾಗಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚು ಅಕ್ರಮ ನಡೆದಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲೂ ಸಾಧ್ಯವಾಗಿರಲಿಲ್ಲ. ನೀವು ಹೊಣೆ ಹೊರಲೇಬೇಕಾದ ವಿಚಾರಗಳನ್ನು ಅನಾವರಣಗೊಳಿಸುತ್ತಾ ಹೋದರೆ ನಿಮ್ಮ ಮೇಲೆ ಭಾರ ಬೀಳಬಹುದು. ಎಷ್ಟೆಂದರೂ ನೀವು ಅರ್ಕಾವತಿ ಅಧಿಪತಿಗಳಲ್ಲವೆ’ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.