ADVERTISEMENT

ಸಿಜೆಐ ಪ್ರಕರಣ: ಜಾಲತಾಣಗಳಲ್ಲಿ ಆಕ್ರೋಶದ ಬಳಿಕ ಕ್ಷಮೆ ಕೋರಿದ ಬಿಜೆ‍ಪಿ ಮುಖಂಡ

ಭಾಸ್ಕರ್‌ ರಾವ್ ವಿವಾದ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 14:12 IST
Last Updated 8 ಅಕ್ಟೋಬರ್ 2025, 14:12 IST
ಭಾಸ್ಕರ್‌ ರಾವ್‌ 
ಭಾಸ್ಕರ್‌ ರಾವ್‌    

ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಪ್ರಕರಣದ ವಿಚಾರದಲ್ಲಿ ಬಿಜೆಪಿ ಮುಖಂಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್‌ ಅವರು ನೀಡಿದ್ದ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.

ವಕೀಲನ ‘ಧೈರ್ಯ’ವನ್ನು ಮೆಚ್ಚಿ ಭಾಸ್ಕರ್ ರಾವ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದರು. ಆ ಪೋಸ್ಟ್‌ ಅನ್ನು ಗಮನಿಸಿದ್ದ ಹಲವರು ಭಾಸ್ಕರ್ ಅವರನ್ನು ಟೀಕಿಸಿ ಆಕ್ರೋಶ ಹೊರಹಾಕಿದ್ದರು. ತಮ್ಮ ‘ಎಕ್ಸ್‌’ ಪೋಸ್ಟ್‌ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಅವರು ಆ ಪೋಸ್ಟ್‌ ಅನ್ನು ಅಳಿಸಿ ಹಾಕಿದ್ದರು.

ಮಾಜಿ ಐಪಿಎಸ್ ಅಧಿಕಾರಿಯೊಬ್ಬರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಮನ್ಸೂರ್ ಅಲಿ ಖಾನ್ ಅವರು ಆಕ್ರೋಶ ಹೊರಹಾಕಿದ್ದರು. ‘ಸರ್‌, ಈ ರೀತಿಯ ಪೋಸ್ಟ್‌ ಅನ್ನು ತಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ’ ಎಂದು ನಿತಿನ್ ಶೇಷಾದ್ರಿ ಎಂಬವರು ‘ಎಕ್ಸ್‌’ ಮಾಡಿದ್ದರು.

ADVERTISEMENT

ಮತ್ತೊಬ್ಬರು ಭಾಸ್ಕರ್ ರಾವ್ ಅವರ ‘ಎಕ್ಸ್‌’ ಅನ್ನು ಬೆಂಗಳೂರು ನಗರ ಪೊಲೀಸರ ಇನ್‌ಸ್ಟಾಗ್ರಾಂ ಖಾತೆಗೆ ಟ್ಯಾಗ್‌ ಮಾಡಿ, ಭಾಸ್ಕರ್ ರಾವ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಈ ಬೆಳವಣಿಗೆ ಬಳಿಕ ಭಾಸ್ಕರ್ ರಾವ್ ಅವರು ಮತ್ತೊಂದು ಪೋಸ್ಟ್‌ ಮೂಲಕ ಕ್ಷಮೆಯಾಚಿಸಿದ್ದಾರೆ. 

ಧೈರ್ಯ ಮೆಚ್ಚುವೆ...

‘ಇದು ಕಾನೂನಿನ ಪ್ರಕಾರ ತಪ್ಪು ಎನಿಸಿದ್ದರೂ ಈ ವಯಸ್ಸಿನಲ್ಲಿ ಯಾವುದೇ ಪರಿಣಾಮ ಲೆಕ್ಕಿಸದೆ ನಿಲುವು ತೆಗೆದುಕೊಂಡು ಅದರಲ್ಲಿ ದೃಢವಾಗಿ ನಿಲ್ಲುವ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ’ ಎಂದು ವಕೀಲ ರಾಕೇಶ್‌ ಕಿಶೋರ್‌ ‘ಎಕ್ಸ್‌’ ಪೋಸ್ಟ್‌ಗೆ  ಭಾಸ್ಕರ್ ರಾವ್ ಅವರು ಪ್ರತಿಕ್ರಿಯಿಸಿದ್ದರು. ನೋವಾಗಿದ್ದರೆ ಕ್ಷಮಿಸಿ... ‘ಕೃತ್ಯ ಎಸಗಿದ (ವಕೀಲ) ವ್ಯಕ್ತಿಯ ನಡೆ ನನಗೆ ಆಘಾತವನ್ನು ಉಂಟು ಮಾಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಯಾವುದೇ ಸಮುದಾಯವನ್ನು ಅವಮಾನಿಸಿಲ್ಲ. ನನ್ನ ‘ಎಕ್ಸ್‌’ ಪೋಸ್ಟ್‌ನಿಂದ ಯಾರಿಗಾದರೂ ನೋವು ತಂದಿದ್ದರೆ ಕ್ಷಮಿಸಿ’ ಎಂದು ಭಾಸ್ಕರ್ ರಾವ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.