ನವದೆಹಲಿ: ಬೆಂಗಳೂರು ಅರಮನೆ ಮೈದಾನದ 15 ಎಕರೆ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಪ್ರಮಾಣಪತ್ರಗಳನ್ನು ನೀಡುವುದನ್ನು ಪ್ರಶ್ನಿಸಿ ಹೊಸ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರಿಗೆ ಕರ್ನಾಟಕ ಸರ್ಕಾರ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ರಾಜವಂಶಸ್ಥರಿಗೆ ₹3400 ಕೋಟಿ ಟಿಡಿಆರ್ ಅನ್ನು ಒಂದು ತಿಂಗಳೊಳಗೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಅರವಿಂದ ಕುಮಾರ್ ಪೀಠವು ಮೇ 22ರಂದು ತೀರ್ಪು ನೀಡಿತ್ತು. ಈ ಆದೇಶದ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
‘ಆಡಳಿತಾತ್ಮಕವಾಗಿ ಸೂಕ್ತ ಆದೇಶಗಳಿಗಾಗಿ ಸಿಜೆಐ ಮುಂದೆ ಅರ್ಜಿ ಸಲ್ಲಿಸಲಿ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ ಹೇಳಿದೆ.
ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಎಲ್ಲ ವಾದಗಳನ್ನು ತಿರಸ್ಕರಿಸಿದ್ದ ದ್ವಿಸದಸ್ಯ ಪೀಠವು ಒಂದು ತಿಂಗಳಲ್ಲಿ ಟಿಡಿಆರ್ ವರ್ಗಾಯಿಸಬೇಕು ಎಂದು ಮೇ 22ರಂದು ತೀರ್ಪು ನೀಡಿತ್ತು. ಈ ಪೀಠಕ್ಕೆ ಹೊಸ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಪೀಠ ಸಲಹೆ ನೀಡಿತು. ಆಗ ಸಿಬಲ್ ಅವರು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದರು.
‘ರಾಜವಂಶಸ್ಥರು ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದ್ವಿಸದಸ್ಯ ಪೀಠ ತೀರ್ಪು ನೀಡಿದೆ. ರಾಜ್ಯ ಸರ್ಕಾರದ ಪರವಾಗಿ ಹೈಕೋರ್ಟ್ ನೀಡಿದ ತೀರ್ಪನ್ನು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳು ರದ್ದುಗೊಳಿಸಲು ಸಾಧ್ಯವಿಲ್ಲ’ ಎಂದು ಸಿಬಲ್ ವಾದಿಸಿದರು.
ಆದಾಗ್ಯೂ, ಪೀಠವು ಸಿಬಲ್ ಅವರಿಗೆ, ‘ನೀವು ಒಂದು ಅರ್ಥದಲ್ಲಿ ಹೆಚ್ಚಿನ ನಿರ್ದೇಶನಗಳನ್ನು ಬಯಸುತ್ತಿದ್ದೀರಿ. ದ್ವಿಸದಸ್ಯ ಪೀಠವು ಈಗಾಗಲೇ ತೀರ್ಪು ನೀಡಿದೆ. ನಾವು ಮತ್ತೆ ಅದನ್ನು ವಿಚಾರಣೆ ನಡೆಸಲು ಸಾಧ್ಯವೇ’ ಎಂದು ಪ್ರಶ್ನಿಸಿತು. ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠವು ಸೋಮವಾರ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿತ್ತು.
ನ್ಯಾಯಾಲಯವು ಈ ವಿಷಯ ಆಲಿಸುವವರೆಗೆ ಟಿಡಿಆರ್ ಬಳಕೆಗೆ ತಡೆಯಾಜ್ಞೆ ನೀಡುವಂತೆ ಸಿಬಲ್ ಅವರು ಪೀಠವನ್ನು ಕೋರಿದರು.
‘ದ್ವಿಸದಸ್ಯ ಪೀಠದ ಆದೇಶದ ಮೇರೆಗೆ ಟಿಡಿಆರ್ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್ನಲ್ಲಿ ಠೇವಣಿ ಇಡಲಾಗಿತ್ತು. ರಾಜವಂಶಸ್ಥರು ಈಗಾಗಲೇ ಟಿಡಿಆರ್ ತೆಗೆದುಕೊಂಡಿದ್ದಾರೆ. ನನಗೆ ಆಘಾತವಾಗಿದೆ. ಟಿಡಿಆರ್ ಅನ್ನು ಯಾವ ರೀತಿಯಲ್ಲಿ ಕೊಡಲಾಯಿತು ಎಂಬುದರ ಬಗ್ಗೆ ಕಳವಳ ಇದೆ’ ಎಂದು ಸಿಬಲ್ ಹೇಳಿದರು. ಗಮನಾರ್ಹ ವಿಷಯವೆಂದರೆ, ರಾಜವಂಶಸ್ಥರಿಗೆ ಈಗಾಗಲೇ ಟಿಡಿಆರ್ ಹಸ್ತಾಂತರಿಸಲಾಗಿದೆ.
‘ಮೇ 22ರ ಆದೇಶದ ವಿರುದ್ಧ ರಾಜ್ಯ ಸರ್ಕಾರವು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ. ಆದರೆ, ಅದನ್ನು ಪಟ್ಟಿ ಮಾಡಲಾಗಿಲ್ಲ’ ಎಂದು ಸಿಬಲ್ ತಿಳಿಸಿದರು.
ರಾಜವಂಶಸ್ಥರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ವಕೀಲ ಟಿ. ಹರೀಶ್ ಕುಮಾರ್, ‘ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯು ಕಾನೂನಿನ ಸಂಪೂರ್ಣ ದುರುಪಯೋಗವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.