ಬೆಂಗಳೂರು: ಕೆಪಿಎಸ್ಸಿ ಕಿರಿಯ ಸಹಾಯಕ, ಅಧ್ಯಕ್ಷರ ಆಪ್ತ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್. ಗೋವಿಂದರಾಜು ಅವರನ್ನು ಅಧಿಕಾರ ದುರುಪಯೋಗ ಆರೋಪದಲ್ಲಿ ಅಮಾನತುಗೊಳಿಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಆದೇಶ ಹೊರಡಿಸಿದ್ದಾರೆ.
‘ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅಭ್ಯರ್ಥಿಯೊಬ್ಬರ ಸಂಬಂಧಿಕರನ್ನು ಗೋವಿಂದರಾಜು ಕಚೇರಿಗೆ ಕರೆಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಅಧ್ಯಕ್ಷರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರದ ನಿಯಮಗಳನ್ನು ಪಾಲಿಸಿಲ್ಲ. ಕಡತದಲ್ಲಿ ಅನುಮೋದನೆ ಪಡೆಯದೆ ಮಾಹಿತಿಯೊಂದನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲು ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿರುವುದು ಅಧಿಕಾರದ ದುರುಪಯೋಗವಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
‘ಹಲವು ಅಭ್ಯರ್ಥಿಗಳು ಗೋವಿಂದರಾಜು ವಿರುದ್ಧ ಮೌಖಿಕವಾಗಿ ದೂರುಗಳನ್ನು ನೀಡಿದ್ದಾರೆ. 15 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಸರ್ಕಾರಿ ಕರ್ತವ್ಯದಲ್ಲಿದ್ದು, ನಿಯಮಾನುಸಾರ ಕಾರ್ಯನಿರ್ವಹಿಸದಿರುವುದು ಕಂಡುಬಂದಿದೆ. ಎರಡು ಬಾರಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕಚೇರಿಯ ಲಿಖಿತ ಆದೇಶವನ್ನು ಪದೇ ಪದೇ ಉಲ್ಲಂಘಿಸಿರುವುದು ಬೇಜವಾಬ್ದಾರಿ ವರ್ತನೆ ಮತ್ತು ಗಂಭೀರ ಸ್ವರೂಪದ ಲೋಪ ಎಂದು ಪರಿಗಣಿಸಿ, ನಿಯಮಗಳನ್ವಯ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.