ಬೆಂಗಳೂರು: ‘ಧರ್ಮದ ಹೆಸರಿನಲ್ಲಿ ಜನರ ನಡುವೆ ದ್ವೇಷ ಬಿತ್ತಿ, ಶಾಂತಿ, ಸೌಹಾರ್ದ ಕದಡುವವರು ಭಯೋತ್ಪಾದಕರು. ಆಜಾನ್ ವಿರೋಧಿಸಿ ಅಭಿಯಾನ ನಡೆಸಿ ಶಾಂತಿ ಕದಡಲು ಯತ್ನಿಸುತ್ತಿರುವವರೂ ಅದೇ ವರ್ಗಕ್ಕೆ ಸೇರಿದವರು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಂಘ ಪರಿವಾರದ ಏಜೆಂಟರು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟಿಕೊಂಡು ಶಾಂತಿ ಕದಡಲು ಹೊರಟಿದ್ದಾರೆ. ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ (ಭಯೋತ್ಪಾದನೆ ನಿಗ್ರಹ) ಕಾಯ್ದೆಯಡಿಯಲ್ಲಿ ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಶ್ರೀರಾಮ ಸೇನೆ ಸೇರಿದಂತೆ ಮತೀಯವಾದಿ ಹಿಂದುತ್ವದ ಸಂಘಟನೆಗಳು ಈ ಸರ್ಕಾರದ ಅವಧಿಯಲ್ಲಿ ಬಾಲ ಬಿಚ್ಚಿವೆ. ಅವರು ಹಿಂದೂ ಪರ ಅಲ್ಲವೇ ಅಲ್ಲ. ಧರ್ಮದ ಹೆಸರಿನಲ್ಲಿ ಎಲ್ಲ ವಿಷಯಗಳಿಗೂ ಮತೀಯ ಬಣ್ಣ ಹಚ್ಚಲಾಗುತ್ತಿದೆ. ಈ ಸರ್ಕಾರದಲ್ಲಿ ನಡೆಯುತ್ತಿರುವ ಶೇಕಡ 40ರಷ್ಟು ಕಮಿಷನ್, ಅಕ್ರಮ ನೇಮಕಾತಿಯಲ್ಲಿ ಈ ಸಂಘಟನೆಗಳಿಗೂ ಪಾಲು ಹೋಗುತ್ತಿರಬಹುದು’ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಹನುಮಾನ್ ಚಾಲೀಸಾ ಪಠಣವನ್ನೂ ವಿರೋಧಿಸುವುದಿಲ್ಲ. ಮನೆಗಳಲ್ಲಿ ಅದನ್ನು ಪಠಿಸಲಿ. ಮಸೀದಿ ಎದುರು ಪಠಣ ಮಾಡಿ ಅಶಾಂತಿ ಸೃಷ್ಟಿಸುವವರನ್ನು ಸರ್ಕಾರ ಬಗ್ಗುಬಡಿಯಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.