ಮಂಡ್ಯ: ‘ತಮಿಳುನಾಡಿನ ಶಿವಗಂಗೈ ಸಂಸ್ಥಾನದ ರಾಜರಾಗಿದ್ದ ಮರಡು ಸಹೋದರರ ಚಿತ್ರಗಳನ್ನು ಬಿಜೆಪಿ ಮುಖಂಡರು ಉರಿಗೌಡ, ದೊಡ್ಡನಂಜೇಗೌಡ ಎಂದು ಬಿಂಬಿಸುತ್ತಿದ್ದಾರೆ’ ಎಂದು ವಕೀಲ ರಮೇಶ್ಗೌಡ ಆರೋಪಿಸಿದ್ದಾರೆ.
ಮರಡು ಸಹೋದರರ ಚಿತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರದರ್ಶಿದರು.
‘ಪೆರಿಯ ಮರಡು, ಚಿನ್ನ ಮರಡು ಎಂಬ ಸಹೋದರರು ಬ್ರಿಟೀಷರ ವಿರುದ್ಧ ಗೆರಿಲ್ಲಾ ಯುದ್ಧ ಸಾರಿದ್ದರು. ಅವರನ್ನು 1801ರಲ್ಲಿ ಗಲ್ಲಿಗೇರಿಸಲಾಯಿತು. 2004ರಲ್ಲಿ ಅವರ ಹೆಸರಿನಲ್ಲಿ ಅಂಚೆ ಚೀಟಿ ತರಲಾಗಿದೆ. ‘ಶಿವಗಂಗಾ ಸೀಮೈ’ ಎಂಬ ತಮಿಳು ಚಲನಚಿತ್ರವನ್ನೂ ನಿರ್ಮಿಸಲಾಗಿದೆ. ಇತಿಹಾಸ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ದುರುಪಯೋಗ ಮಾಡಿಕೊಂಡಿರುವ ಬಿಜೆಪಿ ಮುಖಂಡರು ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ರಮೇಶ್ ಗೌಡ ಹೇಳಿದರು.
ಇದೇ ವೇಳೆ ಮಾತನಾಡಿದ ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೇಗೌಡರು ‘ಬಿಜೆಪಿ, ಸಂಘ ಪರಿವಾರ ಟಿಪ್ಪು ಕೊಂದ ದ್ರೋಹವನ್ನು ಒಕ್ಕಲಿಗರ ತಲೆಗೆ ಕಟ್ಟುಲು ಪ್ರಯತ್ನಿ ಸುತ್ತಿವೆ. ಇತಿಹಾಸದಲ್ಲಿಲ್ಲದ ಉರಿಗೌಡ, ದೊಡ್ಡನಂಜೇಗೌಡ ಎಂಬ ಹೆಸರು ಗಳನ್ನಿಟ್ಟಕೊಂಡು ರೈತ ಸಮುದಾಯಕ್ಕೆ ದೇಶದ್ರೋಹಿ ಸ್ಥಾನ ನೀಡುತ್ತಿವೆ’ ಎಂದು ದೂರಿದರು.
‘ಟಿಪ್ಪು ಹೇಗೆ ಸತ್ತ ಎಂಬ ಬಗ್ಗೆ ಗೊಂದಲಗಳಿಲ್ಲ, ಕ್ಷಣಕ್ಷಣದ ಮಾಹಿತಿಯನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ವ್ಯಕ್ತಿಯೊಬ್ಬ ಹಾರಿಸಿದ ಗುಂಡಿನಿಂದ ಟಿಪ್ಪು ಸತ್ತ ಎನ್ನುವ ದಾಖಲೆಗಳಿವೆ. ಆದರೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ದಾಖಲೆಗಳಿಲ್ಲದ, ಆಧಾರವಿಲ್ಲದ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.