ADVERTISEMENT

ಕೊರೊನಾ ಕರಿನೆರಳು: ಟಾಟಾ ಮಾರ್ಕೊಪೊಲೊ; ಎಂಟು ದಿನ ಕಾರ್ಯಚಟುವಟಿಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 4:25 IST
Last Updated 26 ಜುಲೈ 2020, 4:25 IST
ಬಸ್‌ ನಿರ್ಮಾಣ ಘಟಕದ ಒಳನೋಟ
ಬಸ್‌ ನಿರ್ಮಾಣ ಘಟಕದ ಒಳನೋಟ   

ಧಾರವಾಡ: ನಗರದ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ಟಾಟಾ ಮಾರ್ಕೊಪೊಲೊ ಕಂಪನಿಯನ್ನು ಭಾನುವಾರದಿಂದ ( ಜುಲೈ 26) ಆಗಸ್ಟ್ 3 ರವರೆಗೆ ಮುಚ್ಚಲು ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಕಂಪನಿಯ ಸಿಇಓ ಅವರೊಂದಿಗೆ ನಡೆದ ಸಭೆ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಂಪನಿಯ ಕಾರ್ಮಿಕರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿರುವುದರಿಂದ ಸ್ಯಾನಿಟೈಸೇಷನ್, ತಪಾಸಣೆ ನಿರಂತರವಾಗಿ ನಡೆಸಲಾಗುತ್ತಿದೆ. ಕಾರ್ಮಿಕರು, ಸಿಬ್ಬಂದಿ ಹಾಗೂ ಕಂಪನಿಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಂಟು ದಿನಗಳ ಕಾಲ ಕೈಗಾರಿಕಾ ಘಟಕದ ಚಟುವಟಿಕೆಗಳನ್ನು ಎಂಟು ದಿನಗಳ ಕಾಲ ಸ್ಥಗಿತಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿಯು ಸ್ವಯಂ ಪ್ರೇರಿತರಾಗಿ ನಿರ್ಣಯಿಸಿದ್ದಾರೆ.

ಧೃತಿಗೆಡದಿರಲು ಮನವಿ:ಕೊರೊನಾ ಒಂದು ದುರ್ಬಲ ವೈರಾಣುವಾಗಿದೆ, ಸರಳ ಚಿಕಿತ್ಸೆ ಮೂಲಕ ಸೋಂಕು ನಿವಾರಿಸಿಕೊಳ್ಳಬಹುದಾಗಿದೆ ಕೊರೊನಾ ಭಯದಿಂದ ಯಾರೊಬ್ಬರೂ ಧೃತಿಗೆಡಬಾರದು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಂಕಿತರಿಗೆ ಮತ್ತು ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ನಿರಂತರವಾಗಿ ದೂರವಾಣಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ, ದೂರವಾಣಿ ಸಂಪರ್ಕ ಲೈನ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ‌ ಪಾಟೀಲ ತಿಳಿಸಿದ್ದಾರೆ.

ಧಾರವಾಡ ಮಾನಸಿಕ ಆರೋಗ್ಯವಿಜ್ಞಾನ ಸಂಸ್ಥೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಮತ್ತು ಆಯುಷ್ ವಿಭಾಗಗಳ ಮೂಲಕ ಮನೋ ಸ್ವಾಸ್ಥ್ಯ ನಿರ್ವಹಣೆಗೆ ವಿಡಿಯೋ ಸಂವಾದದ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ, ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಜಿಲ್ಲೆಯ ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT