ಬೆಂಗಳೂರು: ಮಕ್ಕಳು ತೆರಿಗೆ ಕಟ್ಟಿದರೂ ತಾಯಂದಿರು ಗೃಹ ಲಕ್ಷ್ಮಿ ಯೋಜನೆಯಡಿ ನೆರವು ಪಡೆಯಲು ಅರ್ಹರಾಗಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.
‘ಮಕ್ಕಳು ತೆರಿಗೆ ಪಾವತಿಸುವವರಾಗಿದ್ದರೆ ತಾಯಂದಿರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಸೌಲಭ್ಯ ದೊರಕದು’ ಎಂದು ಅವರು ಗುರುವಾರ ಹೇಳಿಕೆ ನೀಡಿದ್ದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಮಕ್ಕಳ ತೆರಿಗೆ ಪಾವತಿ ತಾಯಂದಿರ ಅರ್ಹತೆಗೆ ಅನ್ವಯ ಆಗುವುದಿಲ್ಲ. ಗಂಡ ತೆರಿಗೆದಾರನಾಗಿದ್ದರೆ ಹೆಂಡತಿಗೆ ಸೌಲಭ್ಯ ಸಿಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬಿಪಿಎಲ್ ಪಡಿತರ ಚೀಟಿಗಳಲ್ಲಿ ಯಜಮಾನಿಯ ಹೆಸರು ಸ್ಪಷ್ಟವಾಗಿ ನಮೂದಾಗಿದೆ. ಅಂತಹ ಪ್ರಕರಣಗಳಲ್ಲಿ ಫಲಾನುಭವಿಗಳನ್ನು ಗುರುತಿಸುವುದು ಕಷ್ಟವಾಗುವುದಿಲ್ಲ. ವೃದ್ಧಶ್ರಾಮದಲ್ಲಿರುವ ಮಹಿಳೆಯರ ಬಳಿ ಪಡಿತರ ಚೀಟಿ ಇದ್ದರೆ ಅವರೂ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ನಮೂನೆಯನ್ನು ಇಲಾಖೆಯೇ ಸಿದ್ಧಪಡಿಸಿರುವುದು. ಕೆಲವು ಬದಲಾವಣೆಗಳೊಂದಿಗೆ ಅದೇ ಮಾದರಿಯ ಅರ್ಜಿಯನ್ನು ಒದಗಿಸಲಾಗುವುದು. ಜಾತಿಯ ಬದಲಿಗೆ ವರ್ಗ ಎಂಬ ಪದ ಸೇರಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.