ಕಲಬುರಗಿ: ‘ಶಿಕ್ಷಕರ ನೇಮಕಾತಿಗೆ ನಡೆಯುವ ಪರೀಕ್ಷೆಯಲ್ಲಿ ಅರ್ಜಿ ಕರೆದಷ್ಟು ಶಿಕ್ಷಕರು ಪಾಸಾಗುತ್ತಿಲ್ಲ. ಹೀಗಾಗಿ ವರ್ಷಕ್ಕೆ ಎರಡು ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ತೀರ್ಮಾನಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಮಂಗಳವಾರ ಇಲ್ಲಿಯ ಆದರ್ಶ ನಗರ ಸರ್ಕಾರಿ ಪ್ರೌಢಶಾಲೆ ಹಾಗೂ ಪಿ.ಯು. ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕಳೆದ ಬಾರಿ ನೇಮಕಾತಿ ಪರೀಕ್ಷೆ ನಡೆಸಿದಾಗ 3 ಸಾವಿರ ಶಿಕ್ಷಕರಷ್ಟೇ ಪಾಸಾದರು. ಇನ್ನೂ ಹೆಚ್ಚಿನ ಶಿಕ್ಷಕರ ಅಗತ್ಯವಿತ್ತು. ಇದನ್ನು ಗಮನದಲ್ಲಿರಿಸಿಕೊಂಡು ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸಲಾಗುವುದು. ಸದ್ಯದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಅಷ್ಟೂ ಹುದ್ದೆಗಳಿಗೆ ಅಗತ್ಯವಿರುವಷ್ಟು ಶಿಕ್ಷಕರು ಒಮ್ಮೆಲೇ ಪಾಸಾಗದಿದ್ದರೆ, ಅಷ್ಟು ಹುದ್ದೆಗಳು ಭರ್ತಿಯಾಗುವವರೆಗೆ ವಾರ್ಷಿಕ ಎರಡು ಬಾರಿ ಸಿಇಟಿ ನಡೆಯಲಿದೆ’ ಎಂದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುವ ಭೀತಿಯಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಿಲ್ಲ. ಮೂರು ತಿಂಗಳಲ್ಲಿ ಒಬ್ಬ ಶಿಕ್ಷಕರನ್ನೂ ಜನ
ಪ್ರತಿನಿಧಿಗಳ ಶಿಫಾರಸು ಆಧರಿಸಿ ವರ್ಗಾವಣೆ ಮಾಡಿಲ್ಲ. ಮಾಡಿದ್ದರೆ ದಾಖಲೆ ತೋರಿಸಿ’ ಎಂದು ಸವಾಲು ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.