ಬೆಂಗಳೂರು:ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020ಕ್ಕೆ ತಿದ್ದುಪಡಿ ತರಲು ರೂಪಿಸಿದಶಿಕ್ಷಕರ ವರ್ಗಾವಣೆ ಕರಡು ಅಧಿಸೂಚನೆಗೆ 2,771 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
10ರಿಂದ 20 ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಪಡೆದ ಪ್ರೌಢಶಾಲಾ ಶಿಕ್ಷಕರು ಸೇವಾ ಅಂಕಗಳನ್ನು ನೀಡುವಂತೆ ಕೋರಿ 2,524 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ವರ್ಗಾವಣೆ ಕರಡಿನಲ್ಲಿ ಇರುವಂತೆ ಒಂದೇ ವೃಂದದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿದರೆ, ನೇರ ನೇಮಕಾತಿ ಹೊಂದಿದ ಪ್ರೌಢಶಾಲಾ ಶಿಕ್ಷಕರ ಜತೆಗೆ ವರ್ಗಾವಣೆ ಅವಕಾಶದ ಅರ್ಹತೆ ಹೊಂದಲು ಸಾಧ್ಯವಾಗದು. ಹಾಗಾಗಿ, ಸಲ್ಲಿಸಿದ ಸೇವೆಯ ಆಧಾರದ ಮೇಲೆ ಹೆಚ್ಚುವರಿ ಅಂಕಗಳನ್ನು ನೀಡಬೇಕು ಎಂದು ಕೋರಿದ್ದಾರೆ.
ವರ್ಗಾವಣೆಯಲ್ಲಿ ತಾಲ್ಲೂಕು ಬದಲಿಗೆ ಜಿಲ್ಲೆಯನ್ನೇ ಒಂದು ಘಟಕವಾಗಿ ಪರಿಗಣಿಸುವಂತೆ ಕೋರಿ ಪ್ರೌಢಶಾಲಾ
ಸಹ ಶಿಕ್ಷಕರು 11 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಪುನಃ ಸ್ವಂತ ತಾಲ್ಲೂಕಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸುವಂತೆ 41 ಶಿಕ್ಷಕರು ಕೋರಿದ್ದಾರೆ. ಶೇ 25ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿರುವ ಘಟಕದಿಂದ ಹೊರ ಹೋಗಲು ಅವಕಾಶ
ಕೋರಿ ಒಂದು ಅರ್ಜಿ ಸಲ್ಲಿಕೆಯಾಗಿದೆ.
‘ಹೊಸ ಕಾಯ್ದೆ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಒಳಗೊಂಡಿದೆ. ಆಕ್ಷೇಪಗಳಿಗೆ ಉತ್ತರ ನೀಡಿದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಶೀಗ್ರ ಹೊಸ ನಿಯಮ ಜಾರಿಯಾಗಲಿದೆ’ ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.