ADVERTISEMENT

ನೀವು ಪ್ರಭಾವಿ ಅಲ್ಲವೇ: ತೇಜಸ್ವಿಗೆ ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 23:30 IST
Last Updated 7 ಜುಲೈ 2025, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೆಟ್ರೊ ರೈಲು ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು, ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ನಿಂದ (ಬಿಆರ್‌ಸಿಎಲ್‌) ಬಿಡುಗಡೆ ಮಾಡಿಸಿಕೊಳ್ಳಲು ನಿಮಗೆ ಕಷ್ಟವೇ? ನೀವು ತುಂಬಾ ಪ್ರಭಾವಿ ವ್ಯಕ್ತಿ ಅಲ್ಲವೇ’ ಎಂದು ಸಂಸದ ತೇಜಸ್ವಿ ಸೂರ್ಯ ಅವರನ್ನು ಹೈಕೋರ್ಟ್‌ ಪ್ರಶ್ನಿಸಿದೆ.

‘ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ‘ಮೆಟ್ರೊ ರೈಲು ದರ ನಿಗದಿ ಸಮಿತಿ’ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ತೇಜಸ್ವಿ ಪರ ಹೈಕೋರ್ಟ್‌ ವಕೀಲ ಅನಿರುದ್ಧ ಎ.ಕುಲಕರ್ಣಿ ‘ವರದಿ ಬಹಿರಂಗಗೊಳಿಸುವಂತೆ ಪತ್ರ ಬರೆಯಲಾಗಿದೆ. ನಂತರದಲ್ಲಿ ಸಂಬಂಧಿಸಿದ ಬಿಎಂಆರ್‌ಸಿಎಲ್‌ ಅಧಿಕಾರಿಯನ್ನೂ ಭೇಟಿ ಮಾಡಲಾಗಿದೆ. ಆದರೆ, ಅವರು ಪ್ರತಿಕ್ರಿಯಿಸುತ್ತಿಲ್ಲ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್‌ ಉತ್ತರ ನೀಡುತ್ತಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನೀವು ಪ್ರಭಾವಿ ವ್ಯಕ್ತಿ ಅಲ್ಲವೇ’ ಎಂದು ಕುಟುಕಿ, ಪ್ರತಿವಾದಿಗಳಾದ ಬಿಎಂಆರ್‌ಸಿಎಲ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಎರಡು ವಾರ ಮುಂದೂಡಿತು.

ಲಾಂಛನ, ಜಾಹೀರಾತು ವ್ಯಾಪ್ತಿಗೆ ಹೊರತು: ಹೈಕೋರ್ಟ್

‘ಹೆಸರು, ದಿಕ್ಸೂಚಿ ಅಥವಾ ನಿರ್ದಿಷ್ಟ ಲಾಂಛನ ಒಳಗೊಂಡ ಶೈಕ್ಷಣಿಕ ಸಂಸ್ಥೆಯ ಹೆಸರು ಪ್ರದರ್ಶಿಸಿದ ಮಾತ್ರಕ್ಕೆ ಅದನ್ನು ತೆರಿಗೆ ವಿಧಿಸಬಹುದಾದ ಜಾಹೀರಾತು ಎಂದು ಪರಿಗಣಿಸಲು ಆಗದು’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ಈ ಸಂಬಂಧ ಹೊಸಕೆರೆಹಳ್ಳಿಯ ಗುಪ್ತಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಎಸ್.ಗುಪ್ತಾ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಮ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ವಾಣಿಜ್ಯ ಚಟುವಟಿಕೆಯ ಅಂಶ ಇರಬೇಕು ಮತ್ತು ಅಂತಹ ಜಾಹೀರಾತಿನಿಂದ ಆದಾಯ ಬರುವಂತಿದ್ದರೆ ಮಾತ್ರವೇ ತೆರಿಗೆ ವಿಧಿಸಬಹುದು’ ಎಂದು ನ್ಯಾಯಪೀಠ ಹೇಳಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಟಿ.ಪಿ.ರಾಜೇಂದ್ರ ಕುಮಾರ್‌ ಸುಂಗೆ ವಾದ ಮಂಡಿಸಿದ್ದರು.

ಒಂದೂವರೆ ಸಾವಿರ ಸನ್ನದು ಅಮಾನತು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಕರೆಯ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1531 ವಕೀಲರು ತಮ್ಮ ಸನ್ನದು ಅಮಾನತು ಮಾಡಿಸಿಕೊಂಡಿದ್ದಾರೆ. ‘ರಾಜ್ಯದಲ್ಲಿನ 129368 ವಕೀಲರ ಪೈಕಿ 59 784 ವಕೀಲರು ಪರಿಷತ್ ಕರೆಗೆ ಯಾವುದೇ ಸ್ಪಂದನೆ ವ್ಯಕ್ತಪಡಿಸಿಲ್ಲ. ನ್ಯಾಯಮೂರ್ತಿಗಳು ಸಚಿವರು ವಿವಿಧ ಸಾಂವಿಧಾನಿಕ ಹುದ್ದೆಗಳು ಪ್ರಾಸಿಕ್ಯೂಟರ್‌ಗಳು ಸಹಾಯಕ ಪ್ರಾಸಿಕ್ಯೂಟರ್‌ಗಳು ಲಾಡ್ಜ್‌ ಪೆಟ್ರೋಲ್‌ ಪಂಪ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ರೆಸಾರ್ಟ್‌ ವಿವಿಧ ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆ ಉಪನ್ಯಾಸಕ ವೃತ್ತಿಯಲ್ಲಿ ಇರುವವರು 2025ರ ಜುಲೈ 15ರ ಒಳಗೆ ಸನ್ನದು ಅಮಾನತು ಮಾಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ವಕೀಲರ ಕಾಯ್ದೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಬಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ‘ಈವರೆವಿಗೂ 68553 ವಕೀಲರು ಸರ್ಟಿಫಿಕೇಟ್‌ ಆಫ್‌ ಪ್ರ್ಯಾಕ್ಟೀಸ್‌ಗೆ (ಸಿಒಪಿ) ಅರ್ಜಿ ಸಲ್ಲಿಸಿದ್ದಾರೆ. ಸಿಒಪಿಗೆ ಅರ್ಜಿ ಸಲ್ಲಿಸಿರುವವರು ksbc.org.inನಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬಹುದು’ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.