
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ‘ಸಿ’ ದರ್ಜೆಯ ದೇವಸ್ಥಾನಗಳಿಗೆ ಇರುವ ತಸ್ತೀಕ್ ಅನ್ನು ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಆಗ್ರಹಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಇ.ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್, ‘ರಾಜ್ಯದಲ್ಲಿ ‘ಸಿ’ ದರ್ಜೆಯ 36,217 ದೇವಸ್ಥಾನಗಳಿವೆ. ಬಹುತೇಕ ಎಲ್ಲವೂ ಗ್ರಾಮೀಣ ಪ್ರದೇಶದಲ್ಲಿವೆ. ಪೂಜಾ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ, ತಸ್ತೀಕ್ ಮೊತ್ತ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
ತಸ್ತೀಕ್ ಸದ್ಯ ₹6,000 ಇದೆ. ಇದಕ್ಕೆ ಇನ್ನೂ ₹4,000 ಸೇರಿಸಿ ನೀಡಬೇಕು. ಪೂಜಾದ್ರವ್ಯಗಳಿಗೆ ₹5,000 ನೀಡಬೇಕು. ಈ ಮೊತ್ತ ಎರಡೂ ಸೇರಿದರೆ ಸರ್ಕಾರಕ್ಕೆ ಒಂದು ತಿಂಗಳಿಗೆ ₹35 ಕೋಟಿಯಷ್ಟು ವೆಚ್ಚವಾಗುತ್ತದೆ. ದೇವಸ್ಥಾನಗಳಲ್ಲಿ ಕೆಲಸ ಮಾಡುವ ಇತರ ಉದ್ಯೋಗಿಗಳಿಗೆ ತಿಂಗಳಿಗೆ ₹5,000 ನೀಡಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನಗಳ ಆಸ್ತಿ ಶಕ್ತಿವಂತರ ಪಾಲಾಗಿತ್ತು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಮುತುವರ್ಜಿಯಿಂದಾಗಿ 15 ಸಾವಿರಕ್ಕಿಂತಲೂ ಅಧಿಕ ಆಸ್ತಿಗಳನ್ನು ಮರಳಿ ದೇವಸ್ಥಾನಗಳಿಗೆ ಒಪ್ಪಿಸಲಾಗಿದೆ. ಈಗ ವಶಪಡಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಆಸ್ತಿ ದೇವಸ್ಥಾನಗಳಿಗೆ ಸೇರಲು ಬಾಕಿ ಇದೆ. ಅದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಬೇಕು. ದೇವಸ್ಥಾನದ ಆಸ್ತಿ ರಕ್ಷಿಸಬೇಕು ಎಂದು ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗಳಿಗೆ ರಾಜಕೀಯ ಪಕ್ಷಗಳ ಹಿಂಬಾಲಕರನ್ನು ನೇಮಿಸಬಾರದು. ಅಧಿಕಾರಿಗಳು, ಸಮಾಜಸೇವಕರು, ದಾನಿಗಳು, ನ್ಯಾಯಾಧೀಶರನ್ನು ನೇಮಿಸಬೇಕು. ಎ ಮತ್ತು ಬಿ ವರ್ಗದ ದೇವಸ್ಥಾನಗಳಲ್ಲಿ ಅಲ್ಲಿನ ಆದಾಯದ ಶೇ 35ರಷ್ಟನ್ನು ಆಯಾ ದೇವಸ್ಥಾನದ ಅರ್ಚಕರು, ಸಿಬ್ಬಂದಿಯ ವೇತನ, ದೇವಸ್ಥಾನದ ವೆಚ್ಚಗಳಿಗಾಗಿ ನೀಡಲಾಗುತ್ತಿದೆ. ಅದನ್ನು ಶೇ 50ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶ್ಯಾಮಸುಂದರ ದೀಕ್ಷಿತ್, ಚನ್ನರಾಯ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.