ಬೆಂಗಳೂರು: ‘ಪಠ್ಯಪುಸ್ತಕಗಳಲ್ಲಿ ಒಂದೇ ಜಾತಿಯ ಲೇಖಕರ ಲೇಖನಗಳನ್ನು ಸೇರಿಸಿರುವುದು ಸರ್ವಥಾ ಸರಿಯಲ್ಲ. ಆ ಕಾರಣಕ್ಕಾಗಿ ಇಡೀ ಪಠ್ಯವನ್ನು ಬ್ರಾಹ್ಮಣ ಪಠ್ಯ,ಆರೆಸ್ಸೆಸ್ ಪಠ್ಯ ಎನ್ನುತ್ತಿರುವುದು ಬೌದ್ಧಿಕ ದಾರಿದ್ರ್ಯದ ಪ್ರತೀಕ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷಬಿ.ವಿ. ವಸಂತಕುಮಾರ್ ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ‘ನಮಗಿಂದು ಬೇಕಾಗಿರುವುದು ಬ್ರಾಹ್ಮಣವಾದವೂ ಅಲ್ಲ, ಬ್ರಾಹ್ಮಣ ದ್ವೇಷವೂ ಅಲ್ಲ. ದಲಿತ ಮತ್ತು ಮಾನವ ಪ್ರೀತಿ ಬೇಕಾಗಿದೆ. ಜಾತೀಯತೆ, ಅಸ್ಪೃಶ್ಯತೆ, ಮತಾಂಧತೆ, ಕೋಮುವಾದ, ಭಯೋತ್ಪಾದನೆ ಮೊದಲಾದವುಗಳನ್ನು ಮೆಟ್ಟಿ ನಿಂತು, ಸಮಾಜವನ್ನು ಸಹೃದಯಿಗೊಳಿಸುವ, ಮಕ್ಕಳನ್ನು ಜ್ಞಾನಮಯಿ ಮತ್ತುತೇಜೋಮಯಿಗಳನ್ನಾಗಿಸುವ ಪಠ್ಯ ಅಗತ್ಯ. ರಾಷ್ಟವನ್ನು ಮತ್ತು ರಾಷ್ಟ್ರಭಕ್ತಿಯನ್ನು ಬಲಗೊಳಿಸುವ ಶಕ್ತಿಚೈತನ್ಯದ ಪಠ್ಯ ಬೇಕಾಗಿದೆ. ಈಗಿರುವ ಪಠ್ಯ ಪುಸ್ತಕಗಳಲ್ಲಿ ಅದು ಇದೆಯೋ ಇಲ್ಲವೋ ಎಂಬುದರ ಬಗ್ಗೆ ವಸ್ತುನಿಷ್ಠ ಚರ್ಚೆಯಾಗಲಿ’ ಎಂದು ಹೇಳಿದ್ದಾರೆ.
‘ಈ-ಈಶ, ಗ-ಗಣೇಶ ಎಂದು ಕಲಿಯುತ್ತಿದ್ದ ಕನ್ನಡದ ಮಕ್ಕಳು ಎಂದಿನಿಂದ ಈ-ಈಳಿಗೆ, ಗ-ಗರಗಸ ಎಂದು ಕಲಿಯಲು ಆರಂಭಿಸಿದರೋ ಅಂದಿನಿಂದ ಸೈದ್ಧಾಂತಿಕ ಎಡಪಂಥೀಯ ಪಕ್ಷದ ಪಠ್ಯ ರಾಜಕಾರಣ ಪ್ರಾರಂಭವಾಗಿದೆ. ಅ-ಅಲ್ಲಾ, ಏ-ಏಸು ಎಂದು ಕಲಿಸುವ ಪರಿಪಾಠವನ್ನು ತರಬಹುದಾಗಿತ್ತು. ಸರ್ವಧರ್ಮ ಸಮಭಾವವನ್ನು ಸಾಧಿಸಬಹುದಾಗಿತ್ತು. ಆದರೆ, ಹಾಗಾಗಲಿಲ್ಲ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.