ಬೆಂಗಳೂರು: ವಂಚನೆ ಹಾಗೂ ಅಪರಾಧ ಕೃತ್ಯ ಎಸಗಿ ವಿದೇಶಕ್ಕೆ ಹಾರಿ ಬಚ್ಚಿಟ್ಟುಕೊಳ್ಳುವ ಆರೋಪಿಗಳನ್ನು ಬಂಧಿಸುವುದು ರಾಜ್ಯದ ಪೊಲೀಸರಿಗೆ ಇನ್ನು ಸಲೀಸಾಗಲಿದೆ.
ವಿದೇಶದಲ್ಲಿರುವ ಆರೋಪಿಗಳನ್ನು ಬಂಧಿಸಿ ಕರೆತರುವುದು ಹೇಗೆ? ಯಾವೆಲ್ಲ ಕಾನೂನನ್ನು ಬಳಸಿಕೊಳ್ಳಬೇಕು? ಎಂಬುದರ ಬಗ್ಗೆ ಫ್ರಾನ್ಸ್ನ ಇಂಟರ್ಪೋಲ್ ಅಧಿಕಾರಿಗಳೇ ರಾಜ್ಯದ ಪೊಲೀಸರಿಗೆ ವಿಸ್ತ್ರುತವಾಗಿ ತಿಳಿಸಿಕೊಟ್ಟಿದ್ದು, ಪ್ರಕರಣಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಭಯ ನೀಡಿದ್ದಾರೆ. ಹಲವು ಪ್ರಕರಣಗಳ ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಅಂಥವರನ್ನು ಬಂಧಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ.ಬನ್ನಂಜೆ ರಾಜಾ, ರವಿ ಪೂಜಾರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ.
‘ವಿದೇಶದಲ್ಲಿರುವ ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ಬಗ್ಗೆ ಪೊಲೀಸರಿಗೆ ಮಾಹಿತಿ ಕೊರತೆ ಇದೆ. ಇದರಿಂದ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ. ಹೀಗಾಗಿಯೇ ಈ ಕಾರ್ಯಾಗಾರ ಆಯೋಜಿಸಲಾಗಿತ್ತು’ ಎಂದು ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
‘ಇಂಟರ್ಪೋಲ್ ವಿಶೇಷ ವಿಭಾಗದ ಎಸ್ಪಿ ಅವರೇ ಕಾರ್ಯಾಗಾರಕ್ಕೆ ಹಾಜರಾಗಿದ್ದರು. ಯಶಸ್ವಿ ಪ್ರಕರಣಗಳ ಸಮೇತ ಉಪನ್ಯಾಸ ನೀಡಿದರು.ಸಿಬಿಐ, ರಾಜ್ಯದ ಪೊಲೀಸ್ ಅಧಿಕಾರಿಗಳು ಹಾಗೂ ಕಾನೂನು ಸಲಹೆಗಾರರು ಭಾಗವಹಿಸಿದ್ದರು’ ಎಂದು ಹೇಳಿದ್ದಾರೆ.
‘ವಿದೇಶಗಳ ಕಾನೂನು ಹಾಗೂ ಆರೋಪಿಗಳ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ತನಿಖಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಅಂಥ ಪ್ರಕರಣಗಳ ಬಗ್ಗೆ ಹೆಚ್ಚು ತಲೆಕಡೆಸಿಕೊಳ್ಳುತ್ತಿಲ್ಲ. ಕಾರ್ಯಾಗಾರದ ಮೂಲಕ ಪ್ರತಿಯೊಬ್ಬರಿಗೂ ಮಾಹಿತಿ ನೀಡಲಾಗಿದೆ. ಅದನ್ನು ಕಡ್ಡಾಯವಾಗಿ ಪಾಲಿಸಿ ಆರೋಪಿಗಳನ್ನು ಬಂಧಿಸಿ ತರುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.