ಹುಬ್ಬಳ್ಳಿ: ಭಿಕ್ಷಾಟನೆ ಪದ್ಧತಿ ನಿರ್ಮೂಲನೆ ಸೇರಿ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ಹಣ ವ್ಯಯಿಸುತ್ತದೆ. 2024–25ರಲ್ಲಿ ಹೋರ್ಡಿಂಗ್ಸ್, ಬಸ್, ಡಿಜಿಟಲ್ ವಾಲ್ ಪೇಂಟಿಂಗ್, ಎಲ್ಇಡಿ ಡಿಜಿಟಲ್ ಫಲಕಗಳ ಜಾಹೀರಾತು ಪ್ರಕಟಣೆಗೆ ₹3.95 ಕೋಟಿ ವೆಚ್ಚ ಮಾಡಿದೆ. ಆದರೆ, ನಿರೀಕ್ಷಿತ ಪರಿಣಾಮ ಬೀರಿಲ್ಲ.
ಕೇಂದ್ರ ಪರಿಹಾರ ಸಮಿತಿ ಮತ್ತು ನಿರಾಶ್ರಿತರ ಪರಿಹಾರ ಕೇಂದ್ರಗಳ ನಿರ್ವಹಣೆಗೆ ಭಿಕ್ಷುಕರ, ನಿರಾಶ್ರಿತರ ಕೇಂದ್ರಗಳ ನಿರ್ವಹಣೆಗೆ ಕಳೆದ ಮೂರು ವರ್ಷಗಳಲ್ಲಿ ₹306 ಕೋಟಿ ವಿನಿಯೋಗಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹಣ ಮೀಸಲಿಡಲಾಗುತ್ತಿದೆ. 2021–22ರಲ್ಲಿ ₹63.72 ಕೋಟಿ, 2022–23ರಲ್ಲಿ 104.52 ಕೋಟಿ ಮತ್ತು 2023–24ರಲ್ಲಿ 137.97 ಕೋಟಿ ಖರ್ಚು ಮಾಡಲಾಗಿದೆ.
‘ಬಸ್ ನಿಲ್ದಾಣ, ರೈಲು ನಿಲ್ದಾಣ, ವೃತ್ತಗಳು, ದೇವಸ್ಥಾನ ಆವರಣ ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಕೆಲವೆಡೆ ಪೋಷಕರೇ, ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡುತ್ತಾರೆ. ಪ್ರತಿ ಜಿಲ್ಲೆಯಲ್ಲೂ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ಪಾಲನಾ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದರೂ ಬಾಲಭಿಕ್ಷಾಟನೆ ತಡೆಯುವಲ್ಲಿ ವಿಫಲವಾಗಿದೆ’ ಎಂಬ ಆರೋಪವಿದೆ.
ಭಿಕ್ಷೆ ಬೇಡುವವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. 2024–25ನೇ ಸಾಲಿನ ಏಪ್ರಿಲ್ನಿಂದ ಡಿಸೆಂಬರ್ವರೆಗೆ 306 ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿದೆ. ಇದರಲ್ಲಿ ನಾಲ್ವರು ಮಕ್ಕಳನ್ನು ದತ್ತು ಕೇಂದ್ರಕ್ಕೆ, 79 ಮಕ್ಕಳನ್ನು ಸರ್ಕಾರ ಬಾಲಮಂದಿರಕ್ಕೆ ಹಾಗೂ 182 ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ. ತಾಯಿಯೊಂದಿಗೆ ಇರುವ 41 ಮಕ್ಕಳನ್ನು ಸ್ವಾಧಾರಗೃಹ ಸಂಸ್ಥೆಗೆ ದಾಖಲಿಸಲಾಗಿದೆ.
’ಭಿಕ್ಷಾಟನೆ ದಂಧೆಯಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಜಾಲವೇ ಸಕ್ರಿಯವಾಗಿದೆ. ಸ್ಲಂ ಪ್ರದೇಶದ ಮಕ್ಕಳನ್ನು, ವಯೋವೃದ್ಧರನ್ನು ಬಳಸಿಕೊಂಡು ಭಿಕ್ಷಾಟನೆ ಮಾಡಿಸಲಾಗುತ್ತಿದೆ. ಭಿಕ್ಷೆ ರೂಪದಲ್ಲಿ ಬಂದ ಹಣದಲ್ಲಿ ಭಿಕ್ಷೆ ಬೇಡಿದವರಿಗೆ ಒಂದಿಷ್ಟು ಹಣ ನೀಡಿ ಉಳಿದ ಹಣವನ್ನು ತಾವು ತೆಗೆದುಕೊಂಡು ಹೋಗುತ್ತಾರೆ. ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಸೇರಿ ಜಂಟಿ ಕಾರ್ಯಾಚರಣೆ ಮಾಡಿ ಭಿಕ್ಷಾಟನೆ ನಿರ್ಮೂಲನೆಗೆ ಮುಂದಾಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮೋಹನ್ ಅರ್ಕಸಾಲಿ ಹೇಳಿದರು.
‘ಭಿಕ್ಷುಕರನ್ನು ರಕ್ಷಣೆ ಮಾಡಿ ನಿರಾಶ್ರಿತರ ಕೇಂದ್ರಗಳಿಗೆ ಕರೆದೊಯ್ದಾಗ ಅವರ ವಾರಸುದಾರರು ಬಂದು ಇನ್ನು ಮುಂದೆ ಭಿಕ್ಷಾಟನೆ ಮಾಡಿಸುವುದಿಲ್ಲ ಎಂದು ಹೇಳಿ ಕರೆದೊಯ್ಯುತ್ತಾರೆ. ಕೆಲವು ದಿನಗಳ ಬಳಿಕ ಮತ್ತೆ ಭಿಕ್ಷಾಟನೆ ಮುಂದುವರಿಸುತ್ತಾರೆ. ಕಷ್ಟಪಟ್ಟು ದುಡಿದಾಗ ಸಿಗುವ ಹಣ
ಕ್ಕಿಂತ ಭಿಕ್ಷೆ ಬೇಡಿಯೇ ಹೆಚ್ಚಿನ ಹಣ ಗಳಿಸಬಹುದು ಎಂದು ಭಿಕ್ಷಾಟನೆಯನ್ನು ದಂಧೆ ಮಾಡಿಕೊಂಡಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ನಿವೃತ್ತಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಭಿಕ್ಷಾಟನೆ ನಿರ್ಮೂಲನೆಗೆ ಜನರ ಸಹಕಾರ ಅಗತ್ಯ. ಭಿಕ್ಷುಕರು ಕಂಡಲ್ಲಿ, ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ
-ನೀತಾ ವಾಡ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ, ಧಾರವಾಡ
ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸಿ ಭಿಕ್ಷುಕರನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗಿತ್ತು. ಭಿಕ್ಷಾಟನೆ ನಿರ್ಮೂಲನೆಗೆ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ
-ಧಾರವಾಡ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.