ಮಡಿಕೇರಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ಗೆ ಎರಡು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.
ರಂಜನ್ ಅವರು ಪಕ್ಷದ ಮುಖಂಡರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ಅಪರಿಚಿತ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸ್ಥಿರ ದೂರವಾಣಿಯಿಂದ ಕರೆ ಮಾಡಿರುವ ವ್ಯಕ್ತಿ, ‘ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
ಟಿಪ್ಪು ಜಯಂತಿ ರದ್ದಾದ ಬೆನ್ನಲೇ ಶಾಲಾ ಪಠ್ಯದಲ್ಲಿ ಅಡಕವಾಗಿರುವ ಟಿಪ್ಪು ವಿಷಯವನ್ನು ಕೈಬಿಡುವಂತೆ ಕೋರಿ ರಂಜನ್ ಅವರು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಅವರಿಗೆ ಈಚೆಗೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ವರದಿ ನೀಡುವಂತೆ ಸೂಚಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ.
ಪತ್ರದಲ್ಲಿ ಏನಿತ್ತು?: ‘ಶಿಕ್ಷಣ ಪದ್ಧತಿ ಕುರಿತು ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ದೇಶ ಭಕ್ತಿ, ದೇಶ ಪ್ರೇಮ ಮೂಡಿಸುವ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕು. ಟಿಪ್ಪು ಚರಿತ್ರೆ ಅರಿಯದೇ ಆತನನ್ನು ವೈಭವೀಕರಿಸಿ ಬರೆದಿರುವುದನ್ನು ಮೊದಲು ಕೈಬಿಡಬೇಕು’ ಎಂದು ಕೋರಿ ಸಚಿವರಿಗೆ ಪತ್ರ ಬರೆದಿದ್ದರು.
‘ಟಿಪ್ಪು ಕೊಡವರ ಮಾರಣ ಹೋಮ ನಡೆಸಿದ್ದ. ಮಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ನರನ್ನು ಮತಾಂತರ ಮಾಡಿದ್ದ. ಟಿಪ್ಪು ಕನ್ನಡ ವಿರೋಧಿಯೂ ಹೌದು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಅದಾದ ಮೇಲೆ ಕಳೆದ ವಾರವೂ ಪಠ್ಯಪುಸ್ತಕ ರಚನಾ ಸಮಿತಿಗೂ 16 ಪುಟಗಳ ಪತ್ರ ಬರೆದಿದ್ದರು. ಅದೇ ವಿಚಾರವಾಗಿ ಬೆದರಿಕೆ ಬಂದಿರಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.