ADVERTISEMENT

ರಂಗಕರ್ಮಿ ಮಾಲತಿ ಸಾಗರ ನಿಧನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 17:37 IST
Last Updated 1 ಏಪ್ರಿಲ್ 2019, 17:37 IST
   

ಸಾಗರ: ರಂಗಕರ್ಮಿ ಎಸ್. ಮಾಲತಿ (66) ಸೋಮವಾರ ಬೆಳಗಿನ ಜಾವ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತಿ, ರಂಗ ಕಲಾವಿದ ಪುರುಷೋತ್ತಮ ತಲವಾಟ ಇದ್ದಾರೆ.

ಮಾರ್ಚ್11ರಂದು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರಿಗೆ ಎಚ್ 1ಎನ್1 ಸೋಂಕು ತಗುಲಿರುವುದು ಪತ್ತೆಯಾಗಿತ್ತು.

1970ರ ದಶಕದಲ್ಲಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ‘ಸಮುದಾಯ’ ಚಳವಳಿಯಲ್ಲಿ ಮಾಲತಿ ಅವರು ಸಕ್ರಿಯವಾಗಿದ್ದರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಡಿಪ್ಲೊಮಾ ಪಡೆದಿದ್ದ ಅವರು ನಾಟಕಗಳಲ್ಲಿ ಅಭಿನಯ, ನಿರ್ದೇಶನ, ಕೃತಿ ರಚನೆ ಮೂಲಕ ಕ್ರಿಯಶೀಲರಾಗಿದ್ದರು. ಟಿ.ವಿ ಧಾರಾವಾಹಿ, ಸಿನಿಮಾಗಳಲ್ಲೂ ಅಭಿನಯಿಸಿದ್ದರು.

ADVERTISEMENT

ನಾಲ್ಕು ಕವನ ಸಂಕಲನಗಳನ್ನು ಅವರು ಹೊರತಂದಿದ್ದು, ಅನುವಾದದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. 13 ವರ್ಷಗಳ ಕಾಲ ‘ಪ್ರಜಾವಾಣಿ’ಗೆ ಪುಸ್ತಕ ವಿಮರ್ಶೆ ಬರೆದಿದ್ದ ಮಾಲತಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ, ಸಿಜಿಕೆ ರಂಗ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳು ಸಂದಿವೆ. ಮೃತರ ಅಂತ್ಯಸಂಸ್ಕಾರ ಸೋಮವಾರ ಸಾಗರದಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.