ಬೆಳಗಾವಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆಗೆ ಮುಹೂರ್ತ ನೀಡಿರುವ ಇಲ್ಲಿನ ಗೋವಾವೇಸ್ ವೃತ್ತ ಸಮೀಪದ ವಿದ್ಯಾವಿಹಾರ ವಿದ್ಯಾಲಯದ ಮುಖ್ಯಸ್ಥ ಪಂಡಿತ್ ಎನ್.ಆರ್. ವಿಜಯೀಂದ್ರ ಶರ್ಮಾ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿತ್ತು.
‘ಶಿಲಾನ್ಯಾಸಕ್ಕೆ ನೀವು ನೀಡಿರುವ ಮುಹೂರ್ತ (ಆ.5) ಸರಿ ಇಲ್ಲ. ಅಶುಭ ಮುಹೂರ್ತ ಕೊಟ್ಟಿದ್ದೀರಿ. ಎಚ್ಚರಿಕೆಯಿಂದ ಇರಿ’ ಎಂದು ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಈ ಕುರಿತು ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಶಾಸ್ತ್ರಿನಗರದಲ್ಲಿರುವ ಶರ್ಮಾ ಮನೆ ಬಳಿ ಕಾನ್ಸ್ಟೆಬಲ್ ಒಬ್ಬರನ್ನು ನಿಯೋಜಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದ್ದರಿಂದ ಅವರನ್ನು ಟಿಳಕವಾಡಿ ಠಾಣೆ ಪೊಲೀಸರು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇನ್ಸ್ಪೆಕ್ಟರ್ ವಿನಾಯಕ ಬಡಿಗೇರ, ‘ನಾನೇ ಖುದ್ದಾಗಿ ಶರ್ಮಾ ಅವರನ್ನು ಭೇಟಿಯಾಗಿದ್ದೆ. ಬೆದರಿಕೆ ಕರೆಗಳು ನೇರವಾಗಿ ನನಗೆ ಬಂದಿಲ್ಲ. ಆದರೆ, ನನ್ನ ಕೆಲವು ಭಕ್ತರಿಗೆ ಬಂದಿವೆ. ಅಗತ್ಯವಿದ್ದರೆ ರಕ್ಷಣೆ ಕೋರುತ್ತೇನೆ ಎಂದು ತಿಳಿಸಿದ್ದಾರೆ. ಅವರು ದೂರು ಕೊಟ್ಟಿಲ್ಲ’ ಎಂದು ತಿಳಿಸಿದರು.
‘ಅವರು ಮುಹೂರ್ತ ನೀಡಿದ್ದರು ಎನ್ನುವ ಸುದ್ದಿ ಬಂದ ದಿನದಿಂದಲೇ ಮುಂಜಾಗ್ರತಾ ಕ್ರಮವಾಗಿ ಅವರ ಮನೆ ಬಳಿ ಕಾನ್ಸ್ಟೆಬಲ್ ನಿಯೋಜಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆಗೆ ಶರ್ಮಾ ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.