ಹೂವಿನಹಡಗಲಿ: ತಾಲ್ಲೂಕಿನ ಸೋವೇನಹಳ್ಳಿ ಗ್ರಾಮ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಶುಕ್ರವಾರ ಮೃತಪಟ್ಟಿದ್ದಾರೆ.
ಸೋವೇನಹಳ್ಳಿಯ ಮಲ್ಲನಕೇರಿ ಸುರೇಶ (25), ಕೋಗಳಿ ಮಾರುತಿ (23), ಹಂಪಸಾಗರದ ಪಿ.ಫಕ್ರುದ್ದೀನ್ (25) ಮೃತರು.
ಐದು ಜನ ಸ್ನೇಹಿತರು ಏಕಕಾಲಕ್ಕೆ ನದಿಗೆ ಇಳಿದಿದ್ದು, ಈ ಪೈಕಿ ಮಂಜುನಾಥ ಈಜಿ ದಡ ಸೇರುವ ಜತೆಗೆ ಅಪಾಯಕ್ಕೆ ಸಿಲುಕಿದ್ದ ಗುಂಡಪ್ಪನನ್ನು ರಕ್ಷಿಸಿದ್ದಾರೆ. ಪ್ರತಿದಿನವೂ ಯುವಕರು ಗುಂಪಾಗಿ ನದಿ ಸ್ನಾನಕ್ಕೆ ಹೋಗುತ್ತಿದ್ದರು. ಇಂದು ಆಳವಾದ ಗುಂಡಿಗಳಿರುವ ಸ್ಥಳಕ್ಕೆ ತೆರಳಿ ಯುವಕರು ದುರಂತ ಸಾವಿಗೀಡಾಗಿದ್ದಾರೆ.
‘ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗಾಗಿ ನಿಯಮಮೀರಿ ಆಳವಾದ ಗುಂಡಿಗಳನ್ನು ತೋಡಲಾಗಿದ್ದು, ಅವು ಸಾವಿನ ಗುಂಡಿಗಳಾಗಿ ಮಾರ್ಪಟ್ಟು ಯುವಕರನ್ನು ಬಲಿ ಪಡೆದಿವೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೀನುಗಾರರು ನದಿಯಲ್ಲಿ ಶವ ಹುಡುಕಾಟ ನಡೆಸಿದರು. ಸಂಜೆಯಾದರೂ ಶವಗಳು ಪತ್ತೆಯಾಗಿರಲಿಲ್ಲ.
ಸ್ಥಳಕ್ಕೆ ತಹಶೀಲ್ದಾರ್ ಕೆ.ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಸೋಮಶೇಖರ, ಪಿಎಸ್ಐ ಎಸ್.ಪಿ.ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.