ಬೆಂಗಳೂರು: ‘ಶ್ರೀ ಸತ್ಯಸಾಯಿ ಅನ್ನಪೂರ್ಣ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ವಿತರಣೆ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ 5 ಲಕ್ಷ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಗುರಿ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು.
ಎನ್.ಆರ್.ಕಾಲೊನಿಯ ಶ್ರೀರಾಮ ಮಂದಿರದಲ್ಲಿ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಬುಧವಾರ ಆಯೋಜಿಸಿದ್ದ ಕಾರ್ಯಕ್ರದಲ್ಲಿ ತ್ಯಾಗರಾಜ ಬಾಲ ವಿಕಾಸ ಉಳಿತಾಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಈವರೆಗೆ 2 ಲಕ್ಷ ವಿದ್ಯಾರ್ಥಿಗಳಿಗೆ ಉಪಾಹಾರ ನೀಡಲಾಗುತ್ತಿದೆ’ ಎಂದರು.
‘ತ್ಯಾಗರಾಜ ಬಾಲವಿಕಾಸ ಉಳಿತಾಯ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಕ್ಕಳು ತಮ್ಮ ಪಾಲಕರು ನೀಡುವ ಅಲ್ಪ ಹಣವನ್ನು ಮನಿ ಬ್ಯಾಗ್ನಲ್ಲಿ ಸಂಗ್ರಹಿಸಿ ಬ್ಯಾಂಕ್ ಖಾತೆಗೆ ಹಾಕಿ ಉಳಿತಾಯ ಮಾಡುವುದರಿಂದ ಕಷ್ಟಕಾಲದಲ್ಲಿ ಸಹಾಯವಾಗುತ್ತದೆ. ಇಂತಹ ಒಳ್ಳೆಯ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೆ ತರಲು ಕ್ರಮಕೈಗೊಳ್ಳುತ್ತೇನೆ’ ಎಂದು ಹೇಳಿದರು.
ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ತಾಯಿ ತನ್ನ ಮಕ್ಕಳಿಗೆ ಮಾತೃ ಭಾಷೆಯ ರಹಸ್ಯವನ್ನು ಹೇಳಿಕೊಡುತ್ತಾಳೆ. ನಮಗೆ ಗೊತ್ತಿಲ್ಲದಂತೆ ವ್ಯಾಕರಣವನ್ನೂ ಕಲಿಸುತ್ತಾಳೆ. ಮಕ್ಕಳು ತಾಯಿಯ ಮಾರ್ಗದರ್ಶನದಲ್ಲಿ ಹಣ ಉಳಿತಾಯ ಮಾಡುವುದನ್ನೂ ಕಲಿಯಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.