ADVERTISEMENT

ಬೆಳಗಾವಿಯಲ್ಲಿ ರಾಜ್ಯದ ಮೊದಲ ಗಣೇಶ ಪ್ರತಿಷ್ಠಾಪಿಸಿದ್ದ ತಿಲಕ್: 120 ವರ್ಷದ ಇತಿಹಾಸ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 12:55 IST
Last Updated 25 ಆಗಸ್ಟ್ 2025, 12:55 IST
   

ಬೆಳಗಾವಿ: 1905ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ನೇತೃತ್ವದಲ್ಲಿ ಬೆಳಗಾವಿಯ ಮಾರುಕಟ್ಟೆಯೊಂದರಲ್ಲಿ ಮೊದಲ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಘಟನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಘಟ್ಟವಾಗಿದೆ. 

ಇದು ಕೇವಲ ಒಂದು ಧಾರ್ಮಿಕ ಹಬ್ಬವಾಗಿರಲಿಲ್ಲ. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಜನರನ್ನು ಒಗ್ಗೂಡಿಸುವ ದಿಟ್ಟ ಪ್ರಯತ್ನವಾಗಿತ್ತು. ಕಳೆದ 120 ವರ್ಷಗಳಲ್ಲಿ ಗಣೇಶ ಹಬ್ಬವು ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಗಣೇಶ ಹಬ್ಬವೆಂಬ ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಸಾಮಾಜಿಕ ವಿಷಯಗಳೊಂದಿಗೆ ಜೋಡಿಸುವ ಮೂಲಕ ಬೆಳಗಾವಿಯು ಸಾರ್ವಜನಿಕ ಗಣೇಶೋತ್ಸವ ನಡೆಯುವ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. 

ದೇಶಭಕ್ತಿಯ ಭಾಗವಾಗಿ ಆರಂಭವಾದ ಈ ಉತ್ಸವವು ಇಂದು ಬೃಹತ್‌ ಆಚರಣೆಯಾಗಿ ಬೆಳೆದಿದೆ. ಇಂದು 370 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಉತ್ಸವ ಮಂಡಲಗಳು ನಗರದಾದ್ಯಂತ ಗಣೇಶನನ್ನು ಪ್ರತಿಸ್ಠಾಪಿಸುತ್ತವೆ. ಅವುಗಳಲ್ಲಿ ಕೆಲ ಮಂಡಲಗಳಿಗೆ 75ಕ್ಕೂ ಹೆಚ್ಚು ವರ್ಷಗಳು ತುಂಬಿವೆ. ಕೆಲ ಮಂಡಲಗಳು ಶತಕದ ಗಡಿಯಲ್ಲಿವೆ.  

ADVERTISEMENT

ಪ್ರತಿಯೊಂದು ಮಂಡಲವು ಹಬ್ಬದ ಸಿದ್ಧತೆಯಲ್ಲಿ ಮುಳುಗಿವೆ. ಆಚರಣೆಯಲ್ಲಿ ಚಿಂನತನಶೀಲವಾದ ಹಾಗೂ ಗಂಭೀರವಾದ ವಿಷಯಗಳಿರುತ್ತವೆ. ಹಿಂದೂ ಧರ್ಮಗ್ರಂಥಗಳು, ಆಧುನಿಕ ಯುಗ, ಸಾಮಾಜಿಕ ಸಮಸ್ಯೆಗಳು ಹಾಗೂ ಪರಿಸರ ಜಾಗೃತಿಯನ್ನು ಮೂಡಿಸುವ ವಿಭಿನ್ನ ವಿಷಯಗಳಿಂದ ಕೂಡಿರುತ್ತವೆ. 

ಸೃಜನಾತ್ಮಕವಾದ ವಿಭಿನ್ನ ವಿಷಯಗಳು : 

ಮಂಡಲಗಳು ಈಗಾಗಲೇ ನಿರ್ಧಾರ ಮಾಡಿರುವ ವಿಭಿನ್ನ ವಿಷಯಗಳ ಕುರಿತ 25 ರಿಂದ 30 ಅಡಿಯಷ್ಟು ಎತ್ತರದ ಗಣೇಶ ಮೂರ್ತಿಗಳನ್ನು ವೃತ್ತಿಪರ ಕುಶಲರ್ಮಿಗಳು ರೂಪಿಸುತ್ತಾರೆ. ಕೆಲವು ಮಂಡಲಗಳು ವಿಷಯಾಧಾರಿತ ಮೂರ್ತಿಗಳನ್ನು ರೂಪಿಸಲು ಸಾಕಷ್ಟು ಹಿಂದೆಯೇ ಕೆಲಸ ಆರಂಭಿಸಿವೆ. ಗಣೇಶನ ಪ್ರತಿಸ್ಠಾಪನೆಯ ದಿನವನ್ನು ಪ್ರಕಟಿಸಿವೆ. 

ಮೊದಲ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸೆ.2 1905 ರಲ್ಲಿ ಲೋಕಮಾನ್ಯ ತಿಲಕರು ಶಾಂತಾರಾಮ ಪಾಟ್ನೇಕರ್ ಅವರ ಅಂಗಡಿಯಲ್ಲಿ ಪ್ರತಿಸ್ಠಾಪಿಸಿದರು. ಸ್ಥಳೀಯವಾಗಿ ಪ್ರಭಾವಿಗಳಾಗಿದ್ದ ಗೋವಿಂದರಾವ್ ಯಾಳಗಿ, ವಿಷ್ಣು ಪಾಟ್ನೇಕರ್, ಗೋಪಾಲ್ ಪಟ್ನೇಕರ್, ರಾಮಚಂದ್ರ ಮುರ್ಕುಂಬಿ, ಶಂಕರ ಕಲಘಟಗಿ ಹಾಗೂ ವಾಮನ್ ಕಲ್ಘಟಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು ಎಂದು ಸಾರ್ವಜನಿಕ ಗಣೇಶ ಉತ್ಸವ ಮಂಡಲದ ಮಾರುಕಟ್ಟೆ ನಿರ್ವಹಣಾ ಸಮಿತಿ ಸದಸ್ಯ ವಿಕಾಸ್ ಕಲಘಟಗಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಬ್ರಿಟಿಷರ ಕಣ್ಗಾವಲಿನಿಂದಾಗಿ ಹಾಗೂ ವಸಾಹತುಶಾಹಿ ಅಧಿಕಾರಿಗಳ ಕಣ್ಣು ಗಣೇಶ ಉತ್ಸವದ ಮೇಲೆ ಬಿಳದಂತೆ ಇರಲು ತಿಲಕರೊಂದಿಗೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿತ್ತು ಎಂದು ಕಲಘಟಗಿ ಹೇಳಿದರು. 

ದೇಹಾರೋಗ್ಯದ ಪ್ರಚಾರ :

ಪಯೋನಿರ್‌ ಎಂಬ ಮಂಡಲವು ತನ್ನ ಸ್ಥಾಪನಾ ಉದ್ದೇಶವನ್ನು ಇಂದಿಗೂ ಎತ್ತಿಹಿಡಿಯುತ್ತಿದೆ. ಈ ಮಂಡಲವು ನಡೆಸುವ ಕಾರ್ಯಕ್ರಮಗಳಲ್ಲಿ ದೇಹಾರೋಗ್ಯದ ಸ್ಪರ್ಧೆಯು ಒಂದಾಗಿದೆ. ಇದರ ಜೊತೆ ಆರೋಗ್ಯವೇ ಸಂಪತ್ತು ಎಂಬ ಸಂದೇಶವನ್ನು ನೀಡುತ್ತಿದೆ. ಯುವಕರು ಮಾದಕ ವಸ್ತುಗಳ ದ್ರವ್ಯ ಸೇವನೆ ಮತ್ತು ಹಾನಿಕಾರಕ ವ್ಯಸನಗಳಿಂದ ದೂರವಿರಲು ಈ ಕಾರ್ಯಕ್ರಮವನ್ನು ಮಾಡಲಾಗುತ್ತದೆ. 

ಬೆಳಗಾವಿಯ ಪ್ರತಿ ಮಂಡಲಗಳು ವಿಭಿನ್ನವಾದ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಸಮುದಾಯದ ಜನರಿಗಾಗಿ ಆಯೋಜಿಸುತ್ತವೆ. ಜಿಲ್ಲೆಯಾದ್ಯಂತ ಹಾಗೂ ನೆರೆಯ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಈ ಭವ್ಯ ಪ್ರದರ್ಶನಗಳನ್ನು ವೀಕ್ಷಿಸಲು ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಬೆಳಗಾವಿಯು ರೋಮಾಂಚಕ ಹಾಗೂ ಅರ್ಥಪೂರ್ಣವಾದ ಗಣೇಶ ಉತ್ಸವಕ್ಕೆ ಸಜ್ಜಾಗುತ್ತಿದೆ. ಕೇವಲ ಎತ್ತರದ ಮೂರ್ತಿಗಳೊಂದಿಗೆ ಮಾತ್ರವಲ್ಲದೆ, ಏಕತೆ, ಸಂಸ್ಕೃತಿ ಮತ್ತು ಪ್ರಗತಿಯನ್ನು ಪ್ರೇರೇಪಿಸುವ ಉನ್ನತ ಪರಂಪರೆಯೊಂದಿಗೆ ಗಣೇಶ ಮೂರ್ತಿಗಳು ತಲೆ ಎತ್ತಿ ನಿಂತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.