ಬೆಳಗಾವಿ: ಟಿಪ್ಪು ಸುಲ್ತಾನ್ ನಮ್ಮ ಕುಟುಂಬಕ್ಕೆ ಬಹಳ ತೊಂದರೆ ಕೊಟ್ಟಿದ್ದಾರೆ. ಅದನ್ನು ಈಗ ಮಾತನಾಡಿ ಪ್ರಯೋಜನವಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ರಾಜವಂಶಸ್ಥೆಪ್ರಮೋದಾದೇವಿ ಒಡೆಯರ್ ಹೇಳಿದರು.
ನಗರದ ಕೆಎಲ್ಇ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಆರಂಭಿಸಿರುವ ಫಿಸಿಯೋಥೆರಫಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಟಿಪ್ಪು ಸುಲ್ತಾನ್ ನಮ್ಮ ಕುಟುಂಬಕ್ಕೆ ಬಹಳ ತೊಂದರೆ ಕೊಟ್ಟಿದ್ದಾರೆ. ಅದನ್ನು ಈಗ ಮಾತನಾಡಿ ಪ್ರಯೋಜನವಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸರ್ಕಾರದವರು ಒಂದು ಕುಟುಂಬಕ್ಕೆ ತೊಂದರೆಯಾದರೇನು ಅಂತ ನೋಡುತ್ತಿರಬಹುದು. ಯಾವ ಆಧಾರದ ಮೇಲೆ ಜಯಂತಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಕಾರ್ಯಕ್ರಮವನ್ನು ವೈಯಕ್ತಿಕವಾಗಿ ಬೆಂಬಲಿಸುವುದಿಲ್ಲ. ಆ ಬಗ್ಗೆ ಮಾತನಾಡಿದರೆ ಮನಸ್ಸಿಗೆ ನೋವಾಗುವುದೇ ಜಾಸ್ತಿ’ ಎಂದರು.
‘ಪ್ರತಿ ಚುನಾವಣೆಯಲ್ಲೂ ಮೂರೂ ಪಕ್ಷದವರೂ ನಮ್ಮನ್ನು ಭೇಟಿ ಮಾಡಿ ರಾಜಕೀಯದ ಆಸಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಬರುತ್ತಾರೆ. ಆಸಕ್ತಿ ಇಲ್ಲ ಎಂದಾಗ ಸುಮ್ಮನಾಗುತ್ತಾರೆ’ ಎಂದರು.
ರಾಜಕೀಯಕ್ಕೆ ಸೇರದೆ ಜನರ ಸೇವೆ ಮಾಡುತ್ತೇವೆ. ಚುನಾವಣೆಯಲ್ಲಿ ನಿಲ್ಲುವ ಆಸಕ್ತಿ ಇಲ್ಲ. ಪುತ್ರ ಯದುವೀರ್ ಕೂಡ ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರು ಮನಸ್ಸು ಬದಲಾಯಿಸಿದರೆ ಗೊತ್ತಿಲ್ಲ ಎಂದು ರಾಜವಂಶಸ್ಥೆ ಒಡೆಯರ್ ಹೇಳಿದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ- ಅವರವರ ನಂಬಿಕೆ ಮೇಲೆ ಅವಲಂಬಿತವಾದದ್ದು. ಮಹಿಳೆಯರು ಹೋಗಬೇಕು ಎನ್ನುವುದರಲ್ಲಿ ತಪ್ಪಿಲ್ಲ. ಕಾನೂನು ಪ್ರಕಾರ ಎಲ್ಲರಿಗೂ ಹಕ್ಕು ಇದೆ. ಆದರೆ, ಧಾರ್ಮಿಕ ನಂಬಿಕೆಯ ವಿಚಾರವೂ ಇದಾಗಿದೆ. ನಮ್ಮಲ್ಲಿ ಮನೆಯ ಪದ್ಧತಿಯನ್ನು ಅನುಸರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಶಬರಿಮಲೆಗೆ ಹೋಗಬೇಕೋ ಬೇಡವೋ ಎನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎಂದರು.
ಕೆಎಲ್ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ, ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಕುಲಪತಿ ಪ್ರೊ.ವಿವೇಕ ಸಾವಜಿ, ನಿರ್ದೇಶಕ ಮಹಾಂತೇಶ ಕವಟಗಿಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.