ADVERTISEMENT

ಬ್ರಿಟಿಷರ ವಿರುದ್ಧ ಹೋರಾಡದ ಆರೆಸ್ಸೆಸ್‌: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:10 IST
Last Updated 10 ನವೆಂಬರ್ 2021, 19:10 IST
ಟಿಪ್ಪು ಜಯಂತಿ ಪ್ರಯುಕ್ತ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌ ಅವರು ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಶುಭಾಶಯ ಕೋರಿದರು. ವಿ.ಎಸ್‌. ಉಗ್ರಪ್ಪ, ಸತೀಶ ಜಾರಕಿಹೊಳಿ, ಅಶೋಕ ಪಟ್ಟಣ, ಪ್ರಕಾಶ್ ರಾಥೋಡ್, ಎಂ.ಬಿ. ಪಾಟೀಲ, ಮಹಾಂತೇಶ ಕೌಜಲಗಿ ಇದ್ದರು‌
ಟಿಪ್ಪು ಜಯಂತಿ ಪ್ರಯುಕ್ತ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌ ಅವರು ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಶುಭಾಶಯ ಕೋರಿದರು. ವಿ.ಎಸ್‌. ಉಗ್ರಪ್ಪ, ಸತೀಶ ಜಾರಕಿಹೊಳಿ, ಅಶೋಕ ಪಟ್ಟಣ, ಪ್ರಕಾಶ್ ರಾಥೋಡ್, ಎಂ.ಬಿ. ಪಾಟೀಲ, ಮಹಾಂತೇಶ ಕೌಜಲಗಿ ಇದ್ದರು‌   

ಬೆಂಗಳೂರು: ‘ಟಿಪ್ಪು ಜಾತ್ಯತೀತ ರಾಜ ಮತ್ತು ಜನನಾಯಕ.ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೊ ಅದರ ಪಕ್ಕದಲ್ಲಿ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೂ ದಾಖಲೆಗಳಿವೆ. ಜಾತಿವಾದಿ ಸಂಘಟನೆ ಆರೆಸ್ಸೆಸ್ ಮತಾಂಧತೆ ಕಾರಣಕ್ಕೆ ಟಿಪ್ಪು ಅವರನ್ನು ವಿರೋಧಿಸುತ್ತದೆ. ಇದಕ್ಕೆ ನಾನು ಡೋಂಟ್ ಕೇರ್’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರೆಸ್ಸೆಸ್‌ ಯಾವತ್ತೂ ಬ್ರಿಟಿಷರ ವಿರುದ್ಧ ಹೋರಾಡಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ಆರೆಸ್ಸೆಸ್‌ನ ಒಬ್ಬನಾದರೂ ಸತ್ತಿರುವ ಉದಾಹರಣೆ ಇದ್ದರೆ ಹೇಳಲಿ’ ಎಂದರು.

‘ಬ್ರಿಟಿಷರ ವಿರುದ್ಧ ರಾಜಿ ರಹಿತವಾಗಿ ಹೋರಾಡಿ, ಅವರಿಗೆ ಯಾವತ್ತೂ ತಲೆತಗ್ಗಿಸದೆ ‌ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪುವಿನ ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದರು. ಅಲ್ಲದೆ, ‌ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕೂಡಾ ಆರಂಭಿಸಿದ ಹೆಮ್ಮೆ ನಮ್ಮದು’ ಎಂದರು.

ADVERTISEMENT

‘ಆರೆಸ್ಸೆಸ್‌ ಹೇಳುವ ಸುಳ್ಳುಗಳಿಗೆ ಸೊಪ್ಪು ಹಾಕುವ ಅಗತ್ಯ ಇಲ್ಲ. ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು’ ಎಂದರು.

ಪರಿಶಿಷ್ಟ ಮುಖ್ಯಮಂತ್ರಿ ವಿಚಾರದ ಬಗ್ಗೆ ಬಿಜೆಪಿ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ‘ಅತಿ ಹೆಚ್ಚು ಮಂದಿ ಪರಿಶಿಷ್ಟರು ಮುಖ್ಯಮಂತ್ರಿ ಆಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಬಿಜೆಪಿಗರು ಬೊಮ್ಮಾಯಿ ಅವರನ್ನು ಕೆಳಗಿಳಿಸಿ ಪರಿಶಿಷ್ಟರನ್ನು ಮುಖ್ಯಮಂತ್ರಿ ಮಾಡಲಿ’ ಎಂದು ಮರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.