ಕಲಬುರ್ಗಿ: ಅಫಜಲಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಅವರು ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಸೋಮವಾರ, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ಬಂಧನಕ್ಕೆ ಒಳಗಾದರು.
ರುಕ್ಮಿಣಿ ಅವರು ಚೌಡಾಪುರ ತಾ.ಪಂ. ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿದ್ದಾರೆ. ಭೀಮಾಶಂಕರ ಅವರು ಕರಜಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾಯಿತರಾಗಿ ಉಪಾಧ್ಯಕ್ಷರಾಗಿದ್ದಾರೆ. ಪರಸ್ಪರ ವಿರೋಧಿ ಪಕ್ಷದಲ್ಲಿದ್ದರೂ ಮದುವೆ ಸಂಬಂಧಕ್ಕೆ ಅಡ್ಡಿ ಬಂದಿಲ್ಲ. ಸಂಪ್ರದಾಯದಂತೆ ಭೀಮಾಶಂಕರ ಅವರ ಕುಟುಂಬ ಸದಸ್ಯರು ರುಕ್ಮಿಣಿ ಅವರ ಮನೆಗೆ ತೆರಳಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಎರಡೂ ಕುಟುಂಬಗಳ ಸಮ್ಮತಿ ಮೇರೆಗೆ ಸೋಮವಾರ ಮದುವೆ ಕಾರ್ಯ ಜರುಗಿತು. ಎರಡೂ ಪಕ್ಷಗಳ ಮುಖಂಡರು ನೂತನ ವಧು–ವರರನ್ನು ಹರಸಿದರು.
‘ನಮ್ಮ ಕುಟುಂಬದಿಂದ ಮದುವೆ ಪ್ರಸ್ತಾಪ ಇಟ್ಟಿದ್ದೆವು. ಹಿರಿಯರೆಲ್ಲ ನೋಡಿ ಒಪ್ಪಿಗೆಯಾದ ಬಳಿಕ ಮದುವೆ ಮಾಡಿಕೊಂಡಿದ್ದೇವೆ. ಮದುವೆಗೂ, ರಾಜಕೀಯಕ್ಕೂ ಸಂಬಂಧವಿಲ್ಲ. ನಾನಂತೂ ಬಿಜೆಪಿಗೆ ಹೋಗುವುದಿಲ್ಲ. ಪತ್ನಿ ರುಕ್ಮಿಣಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತಿಸುತ್ತೇವೆ’ ಎಂದು ಭೀಮಾಶಂಕರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.