ರಾಮನಗರ: ‘ರಾಜ್ಯದಲ್ಲಿ ಬರಗಾಲವಿರುವುದರಿಂದ ಜಲಾಶಯಗಳಲ್ಲೂ ನೀರು ಕಡಿಮೆಯಾಗಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆ ಕುಸಿದಿದ್ದು, ಸ್ವಲ್ಪ ಲೋಡ್ ಶೆಡ್ಡಿಂಗ್ ಇದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅಘೋಷಿತ ಲೋಡ್ ಶೆಡ್ಡಿಂಗ್ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿದ್ಯುತ್ಗಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ. ಜೊತೆಗೆ ನೆರೆಯ ರಾಜ್ಯಗಳ ಮೊರೆ ಹೋಗಲಾಗಿದೆ’ ಎಂದರು.
ಅನುದಾನ ಕಡಿತ ನಿಜ: ‘ಬಿಜೆಪಿ ಶಾಸಕ ಮುನಿರತ್ನ ಅವರ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ಕಡಿತವಾಗಿರುವುದು ನಿಜ. ಐದು ವರ್ಷದ ಹಿಂದಿನ ಸ್ಥಿತಿ ಹೇಗಿತ್ತು ಎಂಬುದನ್ನು ಮುನಿರತ್ನ ಒಮ್ಮೆ ನೆನಪಿಸಿಕೊಳ್ಳಲಿ. ಆಗ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ₹ 400 ಕೋಟಿ ಅನುದಾನ ಕೊಟ್ಟಿದ್ದರು. ಬಿಜೆಪಿ ಬಂದ ಬಳಿಕ ₹ 260 ಕೋಟಿ ಕಡಿತ ಮಾಡಿದ್ದರು’ ಎಂದು ಗಮನ ಸೆಳೆದರು.
‘ನಂತರ ಅಧಿಕಾರಕ್ಕೆ ಬಂದ ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ₹ 7 ಸಾವಿರ ಕೋಟಿ ಅನುದಾನದ ಪೈಕಿ, ₹ 5 ಸಾವಿರ ಕೋಟಿ ಕಡಿತ ಮಾಡಿದ್ದರು. ಬೆಂಗಳೂರಿನ 14 ಬಿಜೆಪಿ ಶಾಸಕರು ₹ 9 ಸಾವಿರ ಕೋಟಿ ಅನುದಾನ ತೆಗೆದುಕೊಂಡಿದ್ದರು. 12 ಕಾಂಗ್ರೆಸ್ ಶಾಸಕರಿಗೆ ಕೇವಲ ₹ 1,450 ಕೋಟಿ ಕೊಟ್ಟಿದ್ದರು. ಅನುದಾನ ಕಡಿತವಾಗಿದೆ ಎನ್ನುವವರು ಹಿಂದೆ ಏನಾಗಿತ್ತು ಎಂಬುದನ್ನು ಸಹ ಹೇಳಬೇಕಲ್ಲವೆ? ಬಿಜೆಪಿಯವರು ಮಾಡಿದ್ದನ್ನು ಜನರ ಮುಂದಿಡಬೇಕಲ್ಲವೆ? ಆದರೂ, ಮುನಿರತ್ನ ಅವರಿಗೆ ಅನುದಾನ ಕೊಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೇಳುತ್ತೇನೆ’ ಎಂದರು.
‘ಪಠ್ಯ ಪುಸ್ತಕ ಪರಿಷ್ಕರಣೆಗೆ ಹೊರ ರಾಜ್ಯದವರನ್ನು ನೇಮಿಸಿರುವ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಹಿಂದೆ ಬಿಜೆಪಿಯವರು ರಾಜ್ಯದ ದೊಡ್ಡ ವ್ಯಕ್ತಿಯನ್ನೇ ನೇಮಕ ಮಾಡಿದ್ದರು. ಆಗ ಏನೆಲ್ಲಾ ಆವಾಂತರವಾಯಿತು ಎಂದು ಜನರಿಗೆ ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.